प्रज्वालितॊ ज्ञानमयप्रदीपः

ಸೋಮವಾರ, ಜನವರಿ 4, 2016

ವೇದ ವಾಙ್ಮಯ


ನಮಃ ಸಭಾಭ್ಯಃ ಸಭಾಪತಿಭ್ಯಶ್ಚ|
      ನಾನು ಕೈಗೆತ್ತಿಕೊಂಡಿರುವುದು ಅಗಾಧವಾದ ವೇದರಾಶಿಯ ವಿಶ್ಲೇಷಣೆಯೆಂದು ಭಯವಾಗುತ್ತಿದ್ದರೂ ಸನಾತನ ಪರಂಪರೆಯ ಉಳಿವಿಗೆ ನನ್ನದೊಂದು ಅಳಿಲು ಸೇವೆ ಎಂದು ತಿಳಿದಿ ದ್ದೇನೆ. ಅಷ್ಟಕ್ಕೂ ನಾನೇನೂ ವೇದದ ಸಕಲ ವಿಭಾಗಗಳ ಅವಲೋಕನ ಮಾಡುತ್ತಿಲ್ಲ, ಅದು ಸಾಧ್ಯವೂ ಆಗಲಿಕ್ಕಿಲ್ಲ. ಆದರೆ ಈ ನಮ್ಮ ವೇದ ವಾಙ್ಮಯದ ಕೆಲವೊಂದಿಷ್ಟು ವಿಚಾ ರಗಳನ್ನು ನನಗೆ ತಿಳಿದ ಮಟ್ಟಿಗೆ ಹಿರಿಯ ವಿದ್ವಾಂಸರುಗಳ ಅಭಿಪ್ರಾಯವನ್ನೂ ಸೇರಿಸಿ ತಮ್ಮ ಮುಂದಿಡಲು ಉಪಕ್ರಮಿ ಸುತ್ತೇನೆ. ಮೊದಲಾಗಿ ನನಗೆ ಈ ವೇದದಲ್ಲಿ ಅನುರಕ್ತಿಯುಂಟಾಗಲು ಕಾರಣೀಭೂತರಾದ ನನ್ನೆಲ್ಲ ಹಿರಿಯ ಗುರುಗಳಿಗೆ ಶಿರಸಾ ಪ್ರಣಾಮಗಳನ್ನು ಗೈಯ್ಯುತ್ತೇನೆ. ಈ ವೇದ ವಿಚಾರದಲ್ಲಿ ಇದಮಿತ್ಥಂ ಎಂದು ಉಸುರಬಲ್ಲ ಸಾಮರ್ಥ್ಯವಿದ್ದ ನನ್ನ ಆತ್ಯಂತಿಕ ಗುರು ಶ್ರೀ ಶೇಷಾಚಲ ಶರ್ಮರು. ಅವರು ಈ ವಿಚಾರದಲ್ಲಿ ನನ್ನೊಳಗೆ ಅಚ್ಚೊತ್ತಿದ್ದನ್ನು ಇಲ್ಲಿ ಅರುಹುವ ಪ್ರಯತ್ನ ಮಾಡುತ್ತೇನೆ ಹಾಗಾಗಿ ಅವರಿಗೆ ನನ್ನ ಗೌರವ ಪೂರ್ವಕ ನಮನಗಳು. ವೇದವೆಂದರೆ ಕೇವಲ ಹಿಂದಿನ ಮಂತ್ರಗಳಷ್ಟೇ ಅಲ್ಲ. ತದನಂತರದ ಕಾಲಘಟ್ಟದಲ್ಲಿ ಜೀವನ ಧರ್ಮವನ್ನು ಬೋಧಿಸಿದ ಎಲ್ಲ ಸಾಹಿತ್ಯಗಳೂ ವೇದವೆಂದೇ ಪರಿಗಣಿಸಲ್ಪಡಬೇಕು ಎಂಬುದು ನನ್ನ ಅಂಬೋಣ, ಆಧುನಿಕವಾದ ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಕಂಡುಕೊಂಡ ಸತ್ಯಗಳ ಸಾಹಿತ್ಯವೂ ವೇದಗಳೇ ಆಗಿವೆ ಎಂಬುದು ನನ್ನ ಅಭಿಮತ. ವೇದ ಮಂತ್ರಗಳನ್ನು ಕೇವಲ ಮಡಿಗಂಟಿನೊಳಗಿಟ್ಟು ಅದನ್ನು ಪುರೋಹಿತರುಗಳ ಸ್ವತ್ತನ್ನಾಗಿಸಿ ಮಾನವ ಜೀವನ ಧರ್ಮ ದಿಂದ ದೂರಾಗಿಸಿರುವುದು ನಮ್ಮ ಮೌಢ್ಯ ಅಷ್ಟೇ. ಅದಲ್ಲದೇ ಸಕಲ ಜೀವರಾಶಿಗಳ ಒಳಿತನ್ನೇ ಬಯಸಿದ್ದ ವೇದ ರಾಶಿ ಯನ್ನು, ಅದರೊಳಗಿನ ಜೀವನಾಂಶಗಳನ್ನು ಪ್ರಸ್ತುತ ಕಾಲಕ್ಕೆ ಬೇಕಾದ ಅರ್ಥದೊಂದಿಗೆ ಸಮ್ಮಿಳಿತಮಾಡಲಾಗದೇ ಸೋತಿದ್ದು ನಮ್ಮ ಆಲಸ್ಯ. ಅಲ್ಲಿನ ವಿಜ್ಞಾನ, ಅಲ್ಲಿನ ಗಣಿತ, ಅದಲ್ಲದೇ ಇನ್ನೂ ಅನೇಕ ಮೌಲೀಕವಾದ ವಿಚಾರಗಳು ಇಂದು ಕೇವಲ ಪುರೋಹಿತರು ಹೇಳುವ ಮಂತ್ರಗಳು ಎಂಬ ಕಾರಣಕ್ಕೆ ಅವಗಣನೆಗೆ ಗುರಿಯಾಗಿ ಇದೇ ವೇದಾದಿಗಳ ಸೂಕ್ಷ್ಮಾಧ್ಯಯನದಿಂದ ಪಾಶ್ಚಿಮಾತ್ಯರು ಮುಂದುವರೆದು ಕಂಡುಕೊಂಡ ಸತ್ಯಗಳನ್ನೇ ಹೊಸ ಸಂಶೋಧನೆಯೆಂದು ಬಿಂಬಿಸಿ ಲಾಭಪಡೆದುಕೊಳ್ಳುತ್ತಿರುವುದು ಗುಪ್ತಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವೇದದೊಳಗಣ ಹೂರಣಗಳನ್ನು ಸರಳ ಭಾಷೆಯಲ್ಲಿ ನನ್ನ ಅರಿವಿನ ಪರಿಧಿಯಲ್ಲಿ ವಿಸ್ತರಿಸ ಹೊರಡುವ ಉತ್ಸಾಹ ತೋರಿದೆ. ವಿಚಾರಗಳಲ್ಲಿ ತಮ್ಮ ಸಲಹೆ ಸೂಚನೆಗಳಿಗೆ ಅವಕಾಶವನ್ನೀಯುತ್ತಾ ಮುಂಬರಿಯುತ್ತೇನೆ ತಮ್ಮ ಆಶೀರ್ವಾದವಿರಲಿ.
      ವೇದವಾಙ್ಮಯವನ್ನು ಋಕ್, ಸಾಮ ಮತ್ತು ಯಜುಸ್ ಎಂದು ಮೂರು ಬಗೆಯಾಗಿಯೂ, ಅಥರ್ವಣವನ್ನೂ ಸೇರಿಸಿ ನಾಲ್ಕು ಬಗೆಯಾಗಿಯೂ ವಿಂಗಡಿಸಿದ್ದು ಕಂಡುಬರುತ್ತದೆ.   ‘ಋಕ್’ ಎಂದರೆ ಪ್ರಾರ್ಥನಾರೂಪವಾದ ಛಂದೋಬದ್ಧ ರಚನೆಗಳು. ‘ಮಂತ್ರ’ ಎಂಬುದು ಇದರ ನಾಮಾಂತರ. ‘ಯಜುಸ್’ ಎಂದರೆ ಯಜ್ಞ ವಿಧಾನಕ್ಕೆ ಸಾಧರೂಪವಾದುದು, ಇದು ಕೇವಲ ಗದ್ಯಾತ್ಮಕವಾದುದೂ ಆಗಿದೆ. ಇವೆರಡನ್ನೂ ಹೊರತುಪಡಿಸಿದ ಗೀತಾ( ಸಾಮ) ರೂಪವಾದ ಮಂತ್ರಭಾಗವೇ ಸಾಮ. ಈ ಸಾಮದ ಪ್ರಯೋಜನಗಳೂ ವಿಶಿಷ್ಟ, ‘ವಿಘ್ನಶಾಂತಿ’, ‘ದೇವತಾ ತುಷ್ಟಿ’ ಇವೇ ಸಾಮದ ಉದ್ದೇಶಗಳಾಗಿವೆ.  ಇವು ಮೂರರಲ್ಲೂ ಸೇರದೇ ಕೇವಲ ಮಾರಣ, ಮೋಹನ, ಉಚ್ಛಾಟನಾದಿ ವ್ಯವಹಾರಗಳಿಗೆ ಉಪಯುಕ್ತವಾದ ಮಂತ್ರಭಾಗಗಳನ್ನೊಳಗೊಂಡ ವೇದಭಾಗವೇ ‘ಅಥರ್ವಣ’. ಈ ಅಥರ್ವಣವನ್ನು ವೇದವೆಂದು ಪರಿಗಣಿಸಿದ್ದು ತೀರಾ ಇತ್ತೀಚೆಗೆ. ಏಕೆಂದರೆ ವೇದಗಳನ್ನು ‘ತ್ರಯೀ’ ಎಂದೇ ಕರೆಯಲಾಗಿತ್ತು. ಅಂದರೆ ಋಕ್-ಯಜುಸ್- ಸಾಮ ಇವು ಮಾತ್ರ ವೇದವೆಂದು ಪರಿಗಣಿತವಾದವುಗಳು.

     ಇಂತಹ ವೇದರಾಶಿಯನ್ನು ಮತ್ತೆ ಪುನಃ ‘ಸಂಹಿತಾ’, ‘ಬ್ರಾಹ್ಮಣ’, ‘ಆರಣ್ಯಕ’ ಹಾಗೂ ‘ಉಪನಿಷತ್’ ಎಂಬ ನಾಲ್ಕು ಪ್ರಕಾರಗಳಲ್ಲಿ ವಿಭಾಗಿಸಲಾಗಿದೆ. ಸಂಹಿತೆಗಳು ಅನೇಕ ಮಂತ್ರಗಳನ್ನು ಸೇರಿಸಿ ಹೇಳಿದ ಸಂಕಲನವಾದರೆ, ಬ್ರಾಹ್ಮಣಗಳು ಹೆಚ್ಚಾಗಿ ಗದ್ಯರೂಪದ ಸಾಹಿತ್ಯಗಳನ್ನೇ ಹೊಂದಿದ್ದಲ್ಲದೇ ಯಜ್ಞ ಸಂಬದ್ಧವಾದ ವಿಚಾರಗಳನ್ನು ಹೇಳುತ್ತವೆ. ಈ ಬ್ರಾಹ್ಮಣಗಳನ್ನೊಳಗೊಂಡ ಸಾಹಿತ್ಯವನ್ನು ‘ವಾನಪ್ರಸ್ಥಿಗಳೂ’, ‘ಸಂನ್ಯಾಸಿಗಳೂ’ ಅನುಸಂಧಾನ ಮಾಡಲು ಯೋಗ್ಯವೆನಿಸುವ ಭಾಗವೇ ‘ಆರಣ್ಯಕ’ ಹಾಗೂ ‘ಉಪನಿಷತ್’ ಗಳು.

..............................................................

ಸಂಹಿತಾ( ಸಂಹಿತೆಗಳು)
1. ಋಗ್ವೇದ ಸಂಹಿತಾಃ
       ಎಲ್ಲರಿಗೂ ತಿಳಿದಂತೆ ಇದು ಅತ್ಯಂತ ಪ್ರಾಚೀನತಮವಾದ ವೇದಭಾಗ. ಇದರಲ್ಲಿ ಉಪಲಬ್ಧಿಯಾದುದು 1,028 ಸೂಕ್ತಗಳು. ಇವನ್ನು 10 ಮಂಡಲಗಳಲ್ಲಿ ಅಳವಡಿಸಿ ಹೇಳಲಾಗಿದೆ. ಒಂದೊಂದು ಸೂಕ್ತದಲ್ಲಿಯೂ 3 ರಿಂದ 58 ಋಕ್ಕುಗಳು ಕಾಣಸಿಗುತ್ತವೆ. ಒಟ್ಟು ಋಗ್ವೇದದಲ್ಲಿ ಕಾಣಸಿಗುವ ಋಕ್ಕುಗಳ ಸಂಖ್ಯೆ 10,462. ಈ ರೀತಿಯಲ್ಲಿ ನೋಡಿದಾಗ ಸರಾಸರಿ ಒಂದು ಸೂಕ್ತಕ್ಕೆ ಹತ್ತರಿಂದ ಹನ್ನೆರಡು ಋಕ್ಕುಗಳು ಸಿಗುತ್ತವೆ. ಇದಲ್ಲದೇ ಇನ್ನೊಂದು ರೀತಿಯ ವಿಭಾಗಕ್ರಮವೂ ಇದೆ. ಅದೆಂದರೆ ಇಡೀ ಋಗ್ವೇದವನ್ನು ‘ಅಷ್ಟಕ’, ‘ಅಧ್ಯಾಯ’, ‘ವರ್ಗ’ ಗಳಲ್ಲಿ ವಿಭಾಗಿಸುವುದು. ಇದರ ಪ್ರಕಾರ ಪ್ರತೀ ವರ್ಗದಲ್ಲಿ 5 ಋಕ್ಕುಗಳು. ಅಷ್ಟಕದಲ್ಲಿ 8 ಅಧ್ಯಾಯಗಳು. ಇದನ್ನೂ ಮೀರಿ ಅಧ್ಯಯನಕ್ಕೆ ಉಪಯೋಗವಾಗುವಂತೆ ‘ಅನುವಾಕ’ ಕ್ರಮವೂ ಚಾಲ್ತಿಯಲ್ಲಿದೆ.
   ಋಗ್ವೇದದಲ್ಲಿರುವ ಸೂಕ್ತಗಳು ಹಾಗೂ ಋಕ್ಕುಗಳ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಕ್ರಮವಿದೆ. ಎರಡನೇ ಮಂಡಲದಿಂದ ಏಳನೇ ಮಂಡಲದ ವರೆಗೂ ‘ದೇವತಾ’ ದೃಷ್ಟಿಯಿಂದ ಮಾಡಿದ ಸಂಯೋಜನೆ ಕಂಡುಬರುತ್ತದೆ. ‘ಅಗ್ನಿ ದೇವತಾ ಸೂಕ್ತಗಳು’, ‘ಇಂದ್ರ ದೇವತಾ ಸೂಕ್ತಗಳು’, ‘ವರುಣ ದೇವತಾಸೂಕ್ತಗಳು’ ಇತ್ಯಾದಿ. ಮುಂದೆ ಒಂಭತ್ತನೇಯ ಮಂಡಲದಿಂದ ಛಂದಸ್ಸುಗಳ ಕ್ರಮಾನುಸಾರ ಸೂಕ್ತಗಳನ್ನು ಸಂಯೋಜಿಸಲಾಗಿದೆ. ಈ ಎರಡು ವ್ಯವಸ್ಥೆಯಲ್ಲಿ ಆಶ್ಚರ್ಯವೆಂಬಂತೆ ಸೂಕ್ತಗಳ ಕ್ರಮಾಣುಗತ ಇಳಿಕೆ ಕ್ರಮವನ್ನು ಕಾಣುತ್ತೇವೆ ( 58, 50, 42, 34, 28, 16, 10, 5, 3 ಇತ್ಯಾದಿ...!) ಸಮಾನ ಋಕ್ ಸಂಖ್ಯೆಯುಳ್ಳ ಸೂಕ್ತಗಳಾದರೆ ಆಗ ಛಂದಸ್ಸಿನ ಅಕ್ಷರ ಸಂಖ್ಯೆಯು ಇಳಿಕೆಯ ಕ್ರಮದಲ್ಲಿರುತ್ತದೆ. ಅದರಂತೆ ಮಂಡಲಗಳ ಮತ್ತು ಸೂಕ್ತ ಸಂಖ್ಯೆಯ ಸಂಯೋಜನೆಯಲ್ಲಿಯೂ ಇಳಿಕೆ ಕ್ರಮವನ್ನೇ ಅನುಸರಿಸಲಾಗಿದೆ. ಇದಲ್ಲದೇ ಇನ್ನೊಂದು ರೀತಿಯ ಸಂಯೋಜನಾ ಕ್ರಮವನ್ನೂ ಕಾಣುತ್ತೇವೆ. ಅದೇನೆಂದರೆ, ಒಂಭತ್ತನೇಯ ಮಂಡಲದ ಸೂಕ್ತಗಳೆಲ್ಲವೂ ಸೋಮ ದೇವತಾ ಮಂತ್ರಗಳನ್ನು ಒಳಗೊಂಡಿದೆ. ಎಂಟನೇ ಮಂಡಲದ ಸೂಕ್ತಗಳಲ್ಲಿ ‘ಪ್ರಗಾಥ’ ಹಾಗೂ ‘ಕಾಣ್ವ’ ವಂಶೀಯ ಸೂಕ್ತಗಳೇ ತುಂಬಿವೆ..!ಏಳನೇಯ ಮಂಡಲದ ಸೂಕ್ತಗಳು ಕ್ರಮವಾಗಿ ಗೃತ್ಸ್ನಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭರದ್ವಾಜ, ವಸಿಷ್ಠ ಈ ಋಷಿವಂಶೀಯ ಸೂಕ್ತಗಳೇ ಆಗಿವೆ...!( ವಂಶೀಯ ಎಂದರೆ ದೃಷ್ಟಾರರು) ಮೊದಲ ಮತ್ತು ಹತ್ತನೇ ಮಂಡಲದಲ್ಲಿರುವ ಸೂಕ್ತ ಸಂಖ್ಯೆ ಕೇವಲ 1.  ಇದನ್ನು ನೋಡಿದಾಗ 2ರಿಂದ 9 ಮಂಡಲಗಳ ತರುವಾಯ ಈ 1 ಮತ್ತು 10 ನೇ ಮಂಡಲಗಳನ್ನು ಸೇರಿಸಿರಲೂ ಬಹುದು ಎಂಬುದು ಕೆಲ ವಿದ್ವಾಂಸರ ಅಭಿಪ್ರಾಯ...( ಮಕ್ ಡೊನಾಲ್ಡ್) 
       ಅಧ್ಯಯನ ಕ್ರಮದಲ್ಲಿ ಪ್ರತಿಯೊಂದು ಸೂಕ್ತಕ್ಕೂ ಋಷಿ, ದೇವತೆ ಮತ್ತು ಛಂದಸ್ಸುಗಳನ್ನು ತಿಳಿಯಲೇ ಬೇಕೆಂಬ ನಿಯಮವಿದೆ( ...ನಿರುಕ್ತ). ಇದನ್ನು ‘ಕಾತ್ಯಾಯನ’ರು ತಮ್ಮ ‘ಸರ್ವಾನುಕ್ರಮಣಿ’ ಯಲ್ಲಿ ... ‘‘ಯಸ್ಯ ವಾಕ್ಯಂ ಸ ಋಷಿಃ| ಯಾ ತೇನೋಚ್ಯತೇ ಸಾ ದೇವತಾ| ಯದಕ್ಷರ ಪರಿಮಾಣಂ ತಚ್ಛಂದಃ| ಅರ್ಥೇಪ್ಸವಃ ಋಷಯಃ ದೇವತಾಃ ಛಂದೋಭಿಃ ಉಪಾಧಾವನ್" ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಉದಾಹರಣೆಗೆ ಪ್ರಸಿದ್ಧವಾದ ‘ಗಾಯತ್ರೀಮಂತ್ರ’ ಕ್ಕೆ ಋಷಿ- ವಿಶ್ವಾಮಿತ್ರ, ದೇವತೆ-ಸವಿತೃ, ಛಂದಸ್ಸು- 8 ಅಕ್ಷಗಳ 3 ಪಾದಗಳುಳ್ಳ ‘ಗಾಯತ್ರೀ’
ಸಾಮಾನ್ಯವಾಗಿ ಸಂಹಿತಾ ಪಾಠವೆಂದರೆ  ಪದಗಳಿಗೆ ‘ಸಂಧಿ’ಮಾಡಿದ ರೂಪದಲ್ಲಿರುವ ಪಾಠವೇ ಆಗಿದೆ. ಒಮ್ಮೊಮ್ಮೆ ಇದರಲ್ಲಿನ ಪದವಿಭಾಗವೂ ಸುಲಭವಾಗಿರುವುದಿಲ್ಲ. ಅಲ್ಲದೇ ‘ಪ್ರಗೃಹ್ಯ’ ಗಳೂ ‘ಉ’ ಮುಂತಾದ ಅವ್ಯಯಗಳೂ ಸಂಧಿಯಲ್ಲಿ ಸುಲಭವಾಗಿ ಕಾಣುವಂತಿರುವುದಿಲ್ಲ. ಸಮಾಸಗಳಲ್ಲಿಯೂ ಭಿನ್ನ ಪಾದಗಳು ಯಾವುವು ಎಂಬುದು ಸ್ಪಷ್ಟಗೊಂಡಿರುವುದಿಲ್ಲ. ಹೀಗಿರುವಾಗ ಇವನ್ನೆಲ್ಲ ಸ್ಪಷ್ಟಗೊಳಿಸಲೋಸುಗ ‘ಶಾಕಲ್ಯ’ನು ರಚಿಸಿರುವ ಸಂಧಿ ಬಿಡಿಸಿ ಇತಿಕರಣಮಾಡಿ, ಸಮಾಸಗಳನ್ನು ಪ್ರತ್ಯೇಕಿಸಿರುವ ಪಾಠಕ್ಕೆ ‘ಪದಪಾಠ’ ಎನ್ನುತ್ತಾರೆ, ಅದನ್ನು ವಿಶೇಷವಾಗಿ ಅಧ್ಯಯನಮಾಡುತ್ತಾರೆ. ಇಲ್ಲಿ ಇನ್ನೊಂದು ಗಮನೀಯ ಅಂಶವೆಂದರೆ ಸಂಹಿತೆಯ ಸ್ವರಗಳಿಗೂ, ಪದಪಾಠದ ಸ್ವರಗಳಿಗೂ ನಿಯಮಾನುಸಾರ ಅಲ್ಲಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ಆದ್ದರಿಂದ ವೇದಾಧ್ಯಯನ ಮಾಡುವಾಗ ಸಂಹಿತಾ ಪಾಠವನ್ನೂ ಪದ ಪಾಠವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡುವ ಕ್ರಮ ಬಂದಿರುತ್ತದೆ. ಅಲ್ಲದೇ ಪೂರ್ವಪದ ಉತ್ತರಪದಗಳ ಅಕ್ಷರಗಳನ್ನು ಶೃಂಖಲಾಕ್ರಮದಿಂದ ನಿಯತವಾಗಿ ಅನುವೃತ್ತಿ ಮಾಡುವ ‘ಕ್ರಮ ಪಾಠ’, ‘ಜಠಾಪಾಠ’ ಹಾಗೂ ‘ಘನಪಾಠ’ ಮುಂತಾದ ಜಟಿಲ ವ್ಯವಸ್ಥೆಗಳು ಈ ಸಂಹಿತಾ ಪಾಠಕ್ರಮದಲ್ಲಿ ಇವೆ. ಹಾಗಾಗಿಯೇ ಸಾವಿರ ಸಾವಿರ ವರ್ಷಗಳ ನಂತರದಲ್ಲೂ ವೇದಾಂಶಗಳು ಜನಮಾನಸದಿಂದ ಅಳಿಯದೇ ಉಳಿದುಕೊಂಡು ಬಂದಿರುವುದು. ಮತ್ತು ಹಾಗೆ ಉಳಿಸಿಕೊಂಡು ಬಂದ ಘನಪಾಠಿಗಳಿಗೆ ಇಂದಿಗೂ ನಾವು ನತಮಸ್ತಕವಾಗಬೇಕಿರುವುದು...! ಏಕೆಂದರೆ ವೇದ ಪಾಠಗಳು ಅವುಗಳ ನಿರ್ಣಯದಲ್ಲಿ ಹಸ್ತಪ್ರತಿಗಳಿಗಿಂತಲೂ ‘ಮುಖೋಚ್ಚಾರಣೆ’ ಯಲ್ಲಿಯೇ ಉಳಿದುಕೊಂಡಿರುವುದು. ಇಂತಹ ಒಂದು ಕ್ರಮ, ಇಂತಹ ಒಂದು ಅದ್ಭುತ ಸಾಹಿತ್ಯ ಬೇರೆ ಎಲ್ಲಿಯೂ ಕಾಣಸಿಗಲಾರದು..!

      ಋಗ್ವೇದ ಸೂಕ್ತಗಳ ವೈವಿಧ್ಯಃ-
ಈ ಸೂಕ್ತಗಳಲ್ಲಿ ಹಲ್ವು ಪ್ರಕಾರಗಳಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳ ವಿನ್ಯಾಸವನ್ನು ಗಮನಿಸೋಣ.
1. ದೇವತಾ ಸೂಕ್ತಗಳು :- ಭಾರತದ ಇತಿಹಾಸಕಾಲದ ಭಕ್ತಿಯ ತೋರ್ಪಡಿಕೆಯ ಸ್ವರೂಪಕ್ಕೂ ಋಷಿಗಳ ಉಪಾಸನಾ ಸ್ವರೂಪಕ್ಕೂ ಸ್ವಲ್ಪ ವೈಲಕ್ಷಣ್ಯಗಳಿವೆ. ದೇವತೆಗಳ ಬಗೆಗೆ ಋಷಿಗಳಿಗೆ ಭಯ-ಭಕ್ತಿಗಳಿಗಿಂತ ಕೊಡು-ತೆಗೆದುಕೊಳ್ಳುವ ವ್ಯವಹಾರ ಬುದ್ಧಿಯೇ ಹೆಚ್ಚಾಗಿ ಇರುವಂತೆ ತೋರುತ್ತದೆ. ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು’ ಎಂಬಂಥಾ ಆರ್ತ ಭಾವ ಋಗ್ವೇದದ ಸೂಕ್ತಗಳಲ್ಲಿ ಕಂಡುಬರುವುದಿಲ್ಲ. ಸಂಪತ್ತಿಗಳು ಅದರಲ್ಲೂ ಮುಖ್ಯವಾಗಿ ‘ಗೋಧನ’, ‘ವೀರಪುತ್ರಪ್ರಾಪ್ತಿ’ ಇಂತವುಗಳಿಗಾಗಿ ಸ್ತೋತ್ರ ಮಾಡುತ್ತಿದ್ದರೆಂಬುದನ್ನು ಗಮನಿಸಬಹುದಾಗಿದೆ. ಅದಕ್ಕೆ ಅವರು ಆಯ್ದುಕೊಂಡದ್ದು ಮುಖ್ಯವಾಗಿ ‘ಯಜ್ಞ’ವನ್ನು..! ಏಕೆಂದರೆ ಯಜ್ಞ ಗೈದ ಮೇಲೆ ತತ್ ಫಲವನ್ನು ದೇವತೆಗಳು ಕೊಟ್ಟೇ ತೀರಬೇಕು ಮತ್ತು ಕೊಡುತ್ತಾರೆ ಎಂಬ ವಿಶ್ವಾಸದ ಋಕ್ಕುಗಳೇ ಈ ಸ್ತೋತ್ರಗಳಲ್ಲಿ ಅಡಗಿದೆ. ಆದರೆ ಸಾಮಾನ್ಯವಾಗಿ ಸ್ತೋತ್ರಗಳಲ್ಲಿ ಈ ಭಾವ ತೋರಿದರೂ ‘ವರುಣ ಸೂಕ್ತ’ವು ಪಾಪ ಭೀರುತ್ವ ನಾಶಕವಾದ ಅಂಶಗಳ ಕಡೆಗೆ ಹೆಚ್ಚು ಒಲವು ತೋರಿದ್ದು ಕಂಡುಬರುತ್ತದೆ. ಋಷಿಗಳು ತಮ್ಮ ಪಾಪಗಳ ಕುರಿತು ಕ್ಷಮಾಯಾಚನೆ ಮಾಡುತ್ತಾರೆ...!  ಇದಕ್ಕೆ ಪ್ರತಿಯಾಗಿ ‘ವೈದಿಕ ಆರ್ಯ’  ರ ಶೌರ್ಯೋತ್ಸಾಹ ಗಳಿಗೆ ಪ್ರತೀಕವಾಗಿ ಕಾಣುವುದು ‘ಇಂದ್ರಸೂಕ್ತ’..! ಇಂದ್ರನೇ ವೈದಿಕ ಆರ್ಯರ ಯುದ್ಧ ದೇವತೆಯಂತೆ ಕಾಣುತ್ತಾನೆ. ಏಕೆಂದರೆ ಅವನ ವರ್ಣನೆಯಲ್ಲಿ ಅವನ ವಜ್ರಾಯುಧದ ವರ್ಣನೆ ಹೆಚ್ಚಾಗಿ ಕಂಡುಬರುತ್ತದೆ. ‘ವೃತ್ರಾಸುರ’ ಮುಂತಾದ ಅಸುರ..? ! ರನ್ನು ಅವನು ಸದೆಬಡಿಯುವ ವರ್ಣನೆಗಳೇ ಅತ್ಯಾಕರ್ಷಕವಾಗಿ ವರ್ಣಿಸಲ್ಪಟ್ಟಿವೆ. ಇನ್ನೊಂದು ವಿಶೇಷವೆಂದರೆ ‘ಅಗ್ನಿ’ ಇಲ್ಲಿ ಗೃಹದ ಅಧಿದೇವತೆ. ಅಲ್ಲದೇ ಅಗ್ನಿಯೇ ಮಾನವನ ಆತ್ಯಂತಿಕ ಮಿತ್ರನೆಂಬುದು ವರ್ಣಿಸಲ್ಪಟ್ಟಿದೆ. ಮನೆಯ ಮಕ್ಕಳನ್ನು ಆಶೀರ್ವದಿಸುವಂತೆ ಋಷಿಗಳು ಅಗ್ನಿಯನ್ನು ಸ್ತೋತ್ರಮಾಡುತ್ತಾರೆ.ಯಜ್ಞಪ್ರಧಾನವಾದ ಆ ಕಾಲದಲ್ಲಿ ಅಗ್ನಿಗೇ ಅಗ್ರಸ್ಥಾನ ದೊರೆತುದು ವಿಶೇಷವೇನಲ್ಲ ಎನ್ನಿಸುತ್ತದೆ.  ಹಾಗೆಯೇ ‘ಉಷಸ್’ ಸೂಕ್ತವೂ ಅತ್ಯಂತ ರೋಚಕವಾದುದು. ಋಷಿ ಸಂಕುಲದ ಸೌಂದರ್ಯೋಪಾಸನೆ ಈ ಸೂಕ್ತದಲ್ಲಿ ಅತ್ಯಂತ ವಿಶದವಾಗಿ  ತಿಳಿಸಲ್ಪಟ್ಟಿದೆ. "ಪುನಃ ಪುನರ್ಜಾಯಮಾನೀ ಪುರಾಣೀ" ಎಂಬಲ್ಲೆಲ್ಲ ನಿಚ್ಚಳವಾದ ಕಾವ್ಯಾತ್ಮಕ ಶೈಲಿ ನಮ್ಮನ್ನು ಸೌಂದರ್ಯೋಪಾಸನೆಯ ಹೊಸ ಮಜಲಿಗೆ ಕೊಂಡೊಯ್ಯುತ್ತದೆ. ಸವಿತೃ ದೇವನಿಂದ ‘ವಿಕಸಿತಪ್ರಜ್ಞೆ’ ಯನ್ನೂ ‘ರುದ್ರ’ನ ಕೋಪದಿಂದ ಮುಕ್ತಿಯನ್ನೂ ‘ಅಶ್ವಿನೀದೇವತೆ’ಗಳಿಂದ ರೋಗಬಾಧಾ ನಿವೃತ್ತಿಯನ್ನೂ, ‘ವಿಷ್ಣು’ವಿನಿಂದ ಪರಮಪದದ ಆನಂದವನ್ನೂ ಬಯಸಿ ಋಷಿಗಳು ಸ್ತೋತ್ರ ಮಾಡಿದ್ದು ಕಂಡುಬರುತ್ತದೆ. ಹೀಗೇ ಸ್ತೋತ್ರ ಮಾಡುವಾಗ ಒಂದು ಆಶ್ಚರ್ಯವೆಂಬಂತೆ ಎಲ್ಲ ದೇವತೆಗಳನ್ನೂ ಸೇರಿಸಿ ‘ವಿಶ್ವೇದೇವತೆ’ ಎಂಬ ನೂತನ ರೂಪದಲ್ಲಿಯೂ ಸ್ತೋತ್ರ ಗೈದಿರುವುದು ವಿಶೇಷ. 
2. ಆಪ್ರೀ ಸೂಕ್ತಗಳು :- ಕೇವಲ ಯಜ್ಞ ವಿಧಿಗೇ ಅನ್ವಯಗೊಳ್ಳುವಂತಹ ಸೂಕ್ತಗಳು ಪ್ರತಿಯೊಂದು ಋಗ್ವೇದ ಮಂಡಲದಲ್ಲಿಯೂ ಕಾಣಿಸಿಕೊಳ್ಳುತ್ತದೆ.ಇಂತಹ 10  ಸೂಕ್ತಗಳನ್ನು ನಾವು ಕಾಣಬಹುದು. ಇವುಗಳ ಪ್ರತಿಯೊಂದುಸೂಕ್ತದಲ್ಲಿಯೂ ಹತ್ತು ಅಥವಾ ಹನ್ನೆರಡು ಋಕ್ಕುಗಳು ಅಗ್ನಿಯ ಸ್ತೋತ್ರಕ್ಕಾಗಿ ಮೀಸಲಾಗಿವೆ. ಇದಲ್ಲದೇ ‘ತನೂನಪಾತ್’ ಇತ್ಯಾದಿ ದ್ವಾರಗಳು, ‘ದರ್ಭಾ’ ಇತ್ಯಾದಿ ದೇವತಾ ಸ್ತುತಿಗಳೂ ಕ್ರಮಾಗತವಾಗಿ ಕಂಡುಬರುತ್ತವೆ. ಇದನ್ನು ಗಮನಿಸಿದಾಗ ಒಂದೊಂದು ಋಷಿ ವಂಶೀಯರೂ ತಮ್ಮ ಪ್ರತ್ಯೇಕವಾದ ಆಪ್ರೀ ಸೂಕ್ತಗಲನ್ನು ಬಳಸುತ್ತಿದ್ದರು ಎಂದು ತೋರುತ್ತದೆ.ಹಾಗೆಯೇ ಸೋಮಪವಮಾನನ ಕುರಿತ ಒಂಭತ್ತನೇ ಮಂಡಲವೆಲ್ಲ ಯಜ್ಞೋಪಯೋಗೀ ಸೂಕ್ತಗಳಿಂದಲೇ ತುಂಬಿದೆ.
3. ಸಂಸ್ಕಾರ ಸೂಕ್ತಗಳು :- ಮರಣೋತ್ತರವಾದ ಅಪರಕ್ರಿಯೆಗಳ ಕುರಿತು ಅದು ಹೀಗೆಯೇ ನಡೆಯಬೇಕು ಎಂಬುದಕ್ಕೆ ಸಂಬಂಧಿಸಿದ ಮತ್ತು ಇನ್ನೂ ಕೆಲವು ಧಾರ್ಮಿಕ ಆಚರಣೆಗಳಿಗೆ ಉಪಯುಕ್ತವಾದ ಪಿತೃಕರ್ಮಪರ ಸೂಕ್ತಗಳು ಹತ್ತನೇ ಮಂಡಲದಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಪ್ರೇತ ಸಂಸ್ಕಾರ ವಿಚಾರಗಳು ದೇವಯಾನ - ಪಿತೃಯಾನ, ಜೀವಾತ್ಮಕ ವಿಚಾರಗಳು ತುಂಬಿವೆ.
4. ಆಧ್ಯಾತ್ಮಿಕ ಸೂಕ್ತಗಳು :- ವಿಶ್ವೋತ್ಪತ್ತಿ, ವಿಶ್ವವ್ಯಾಪಿಯಾದ ಒಬ್ಬನೇ ಪರಮಾತ್ಮ, ಮುಕ್ತಿ, ಮುಂತಾದ ಆಧ್ಯಾತ್ಮಿಕ ಅಂಶಗಳನ್ನು ವಿವರಿಸುವ ಸೂಕ್ತಗಳು ಇವನ್ನೆಲ್ಲ ವಿವರಿಸುವ ‘ಪುರುಷ ಸೂಕ್ತ’, ‘ನಾಸದೀಯ ಸೂಕ್ತ’ ಮೊದಲಾದವು ಕಂಡುಬರುತ್ತವೆ. ಇವೇ ಮುಂಬರಿದು ಉಪನಿಷತ್- ವೇದಾಂತ ಭಾಗದ ಮೂಲಸ್ರೋತಗಳಾಗಿವೆ.
5. ಆಖ್ಯಾನ ಸೂಕ್ತಗಳು :- ಮುಂದಿನ ನಮ್ಮ ಭಾರತೀಯ ಕಾವ್ಯ ಲೋಕಕ್ಕೆ ಅತ್ಯಂತ ಮೂಲಧನವೆನ್ನಿಸುವ ಆಖ್ಯಾನ ಸೂಕ್ತಗಳು ವೇದ ಸಾಹಿತ್ಯದಲ್ಲೇ ಮೇರು ಸದೃಶವಾದ ಭಾಗವಾಗಿದೆ. ಇವನ್ನು ಸಂವಾದ ಸೂಕ್ತಗಳೆಂದು ಕರೆದರೂ ತಪ್ಪೇನಿಲ್ಲ. ‘ಪುರೂರವಸ್-ಊರ್ವಶೀ, ಯಮ-ಯಮೀ, ವಿಶ್ವಾಮಿತ್ರ-ನದೀ ’ ಮುಂತಾದ ಸಂವಾದಗಳು ಆ ಕಾಲದ ಜನಜೀವನವನ್ನು ಈ ಲೋಕಕ್ಕೆ ತೆರೆದಿಡುವುದರೊಂದಿಗೆ ಮುಂದೆ ಬಂದ ವಾಲ್ಮೀಕಿಯಿಂದಾರಂಭಿಸಿ ಕಾಳಿದಾಸಾದಿಗಳವರೆಗಿನ ಸಾರಸ್ವತ ಸಾಮ್ರಾಟರುಗಳಿಗೆ ಮೂಲವಸ್ತುವನ್ನೊದಗಿಸಿದ ಕೀರ್ತಿ ಈ ಸೂಕ್ತಗಳಿಗೆ ಸಲ್ಲುತ್ತದೆ. 
6. ಮಾಂತ್ರಿಕ ಸೂಕ್ತಗಳು :- ಗರ್ಭ ರಕ್ಷಣೆ, ಆರೋಗ್ಯರಕ್ಷಣೆ, ರೋಗ ಪರಿಹಾರ, ದುಸ್ವಪ್ನನಾಶ, ಶತ್ರುನಾಶ, ವಿರೋಧೀ ಮಂತ್ರವಾದಿಗಳ ನಾಶ..!, ಮುಂತಾದ ತರಹೆವಾರಿ ವಿನಿಯೋಗಗಳಿರುವ ಸೂಕ್ತಗಳನ್ನು ಈ ಶೀರ್ಷಿಕೆಯಡಿಯಲ್ಲಿ ತರಬಹುದಾಗಿದೆ. ಪರ್ಜನ್ಯನಿಂದ ಬೇಗ ಮಳೆ ಸುರಿಯುವಂತೆ ಮಾಡುವ ಸಲುವಾಗಿ ಅನುಸರಿಸಿದ ಮಾಂತ್ರಿಕ ವಿಧಾನವು ತುಂಬ ಹಾಸ್ಯಮಯವಾಗಿಯೂ ಗೋಚರಿಸುತ್ತದೆ.. 
7. ಲೌಕಿಕ ಸೂಕ್ತಗಳು :- ಯಜ್ಞ ವಿಧಿಯ ಅಂಗಗಳನ್ನು ತಿಳಿಸುವ ಸೂಕ್ತಗಳ ನಡು ನಡುವೆಯೇ ಹಲವಾರು ಲೌಕಿಕ ವಿಚಾರಗಳನ್ನು ವಸ್ತುಗಳನ್ನೂ ತಿಳಿಸಿಕೊಡುವ ಸೂಕ್ತಗಳು ಕಂಡುಬರುತ್ತವೆ ಉದಾಹರಣೆಗೆ, ಒಂಭತ್ತನೇ ಮಂಡಲದಲ್ಲಿ ಇರುವ ಸೋಮ ಸೂಕ್ತದ ನಡುವೆಯೇ ನಾನಾ ದುಷ್ಪವೃತ್ತಿನಿಂದಾ ಸೂಕ್ತವಿದೆ. ಅದರಲ್ಲಿ ದ್ಯೂತ ವ್ಯಾಮೋಹದಲ್ಲಿ ಬಿದ್ದು ಸರ್ವಸ್ವವನ್ನೂ ಕಳೆದುಕೊಂಡು ಹೆಂಡತಿ ಮಕ್ಕಳಿಗೂ ಬೇಡದವನಾಗಿ ಹಳಹಳಿಸುವ ಜೂಜುಗಾರನ ಹಾಸ್ಯಭರಿತ ಸ್ಥಿತಿಯ ವರ್ಣನೆ ತುಂಬ ಮನೋಹರವಾಗಿದೆ. ಇದು ಆಕಾಲದ ಕುಟುಂಬ ವ್ಯವಸ್ಥೆಯನ್ನು ನಮಗೆ ತಿಳಿಸಿಕೊಡುತ್ತದೆ.
8. ದಾನಸ್ತುತಿ ಸೂಕ್ತಗಳು :- ಋಗ್ವೇದದ ಹಲವು ಮಂಡಲಗಳಲ್ಲಿ ಹಂಚಿಕೊಂಡಿರುವ ಸುಮಾರು 40 ದಾನ ಸ್ತುತಿಗಳು ಆ ಕಾಲದಲ್ಲಿ ವಿಜಯಿಯಾದ ರಾಜರುಗಳು ಯಜ್ಞಕಾಲದಲ್ಲಿ ಮಾಡಿದ ದಾನಗಳ ಪ್ರಶಂಸೆಯು  ಕಂಡುಬರುತ್ತದೆ. ಇಲ್ಲಿ ಐತಿಹಾಸಿಕ ನಾಮಾಂಕಿತಗಳನ್ನು ತಿಳಿಯುವುದರೊಮ್ದಿಗೆ ಆದರ್ಶ ಜೀವನದ ಸ್ಥಿತಿಗತಿಗಳನ್ನೂ ತಿಳಿದುಕೊಳ್ಳಬಹುದು.
9. ಕೆಲವು ಕೂಟರಚನೆಯ ಸ್ತುತಿಗಳು :- ಒಗಟಿನಂತಿರುವ ಕೆಲವು ಋಕ್ಕುಗಳನ್ನೊಳಗೊಂಡ ಕೆಲವೊಂದು ಸೂಕ್ತಗಳು ಋಗ್ವೇದದಲ್ಲಿದೆ. ಸೂರ್ಯ, ಯಜ್ಞ ಇತ್ಯಾದಿ ಗಳ್ ಕುರಿತು ಒಗಟಿನ ರೂಪಗಳು ಕಂಡುಬರುತ್ತವೆ. ಅಂತಹ ಒಗಟು ಸೂಕ್ತಗಳ ಎಷ್ಟೋ ಕೂಟಪ್ರಶ್ನಗಳನ್ನು ಇಂದಿಗೂ ಭೇದಿಸಲಾಗಿಲ್ಲ..!

     ಹೀಗೇ ಋಗ್ವೇದ ಸಂಹಿತೆಯ ಸೂಕ್ತಗಳ ಸಿಂಹಾವಲೋಕನದಿಂದ ಧರ್ಮನಿಷ್ಠೆಯ ಜೊತೆಜೊತೆಗೇ ಕಾವ್ಯ ನಿಷ್ಠೆಯೂ ಋಷಿಗಳಲ್ಲಿ ಮಿಂಚುತ್ತಿರುವ ವಿಷಯ ವ್ಯಕ್ತವಾಗುತ್ತದೆ. ಸಂಸ್ಕೃತ ಸಾಹಿತ್ಯದ ಮೂಲಸ್ರೋತವನ್ನು ಅನ್ವೇಷಿಸುವವರಿಗೆ ಮಹಾಭಾರತಾದಿ ಛಂದೋಬಂಧ ಸಾಹಿತ್ಯಗಳ ವಿಕಸಿತ ರೂಪವನ್ನರಿಯಲು ಋಗ್ವೇದದ ಛಂದಸ್ಸುಗಳು ಸಹಾಯಕವಾಗಿವೆ ಮತ್ತು ವೇದಜ್ಞಾನವಿಲ್ಲದ ರಾಮಾಯಣಾದಿಗಳ ಅಧ್ಯಯನವು ನಿರರ್ಥಕವಾಗುತ್ತದೆ ಎಂಬುದನ್ನು ಕಾಣಬಹುದಾಗಿದೆ.
ಇನ್ನು ನಾವು ಈ ವೇದದಲ್ಲಿ ಸ್ತಿತಿಸಲ್ಪಟ್ಟ ದೇವಾನುದೇವತೆಗಳ ಕುರಿತು ಕಿಂಚಿತ್ ಕಣ್ಣು ಹಾಯಿಸಲೇ ಬೇಕು. ವೇದದಲ್ಲಿ ಸ್ತುತರಾದ ದೇವತೆಗಳು ಮನುಷ್ಯ ಜೀವನದಲ್ಲಿ ಪ್ರಭಾವ ಬೀರುವ ವಿಭೂತಿಗಳು ಮತ್ತು ಮಹಾ ಸತ್ವರೂ ಆಗಿದ್ದಾರೆ. ಮೊದ ಮೊದಲು ಕಂಡುಬರುವ ವರ್ಣನೆಗಳಲ್ಲಿ ಭಯ-ಭೀತಿಗಳನ್ನು ತರುವಂತಹುದಾದರೂ ಸ್ತೋತ್ರದಿಂದ ಅವರನ್ನು ಪ್ರಸನ್ನಗೊಳಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡಂತಿದೆ. ಅವರು ಮನುಷ್ಯರಿಗೆ ಮಿತ್ರರಾಗುತ್ತಾರೆ ಮತ್ತು ಪರಸ್ಪರವಾಗಿ ಆ ದೇವತೆಗಳಲ್ಲಿಯೂ ಸಖ್ಯವಿದೆ ಹಾಗಾಗಿ ಅವರೆಲ್ಲರೂ ಶತ್ರುಗಳಾದ ದಾನವರನ್ನು..( ಈ ದಾನವ ಪದ ಬಳಕೆ ಹೇಗೆ ಒಡಮೂಡಿತೆಂಬುದಕ್ಕೆ ವೇದಗಳು ವಿವರಣೆ ನೀಡದಿದ್ದರೂ ನಂತರ ಬಂದ ಉಪನಿಷತ್ತುಗಳು ಅವರ ಲಕ್ಷಣವನ್ನು ವಿವರಿಸುವಲ್ಲಿ ಸಫಲವಾಗಿವೆ)  ನಾಶಗೈಯ್ಯುವುದರಲ್ಲಿ ಸಹಕರಿಸುವವರು. ಮನುಷ್ಯನು ಈ ದೇವತೆಗಳ ದಾಸತ್ವವನ್ನು ಪಡೆದುಕೊಂಡಾಗ ಮಾತ್ರ ಸ್ತೋತ್ರ ಮಾಡುವುದರ ಫಲವಾಗಿ ಈ ದಾನವರುಗಳನ್ನು ನಿಯಂತ್ರಿಸಬಲ್ಲ ಶಕ್ತಿಯನ್ನು ಪಡೆಯುತ್ತಾನೆ ಎಂಬ ವಿವರಣೆ ಸಿಗುತ್ತದೆ. ಇದೇ ಮಂತ್ರದ ‘ಶಕ್ತಿ’ ಅಥವಾ ಸೂಕ್ತಗಳ ‘ಶಕ್ತಿ’ ಎನ್ನಿಸಿಕೊಂಡಿತು.
ಆಶ್ಚರ್ಯವೆಂದರೆ ವೇದದಲ್ಲಿ ವರ್ಣಿತವಾದ ದೇವತೆಗಳ ಸಂಖ್ಯೆ ಕೇವಲ 33...! ಈ ಸಂಖ್ಯೆಯು ಇರಾನಿನ ದೇವತೆಗಳ ಲೆಕ್ಕಾಚಾರಗಳಲ್ಲೂ ಪ್ರಸ್ತುತವೆನ್ನಿಸಿವೆ..! ಈ ದೇವತೆಗಳ ಸಾಂಖ್ಯಿಕ ವಿವರಗಳು ಬ್ರಾಹ್ಮಣಗಳಲ್ಲಿ ದೊರೆಯುತ್ತದೆ. ಅದನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

೧. ಅಷ್ಟ ವಸುಗಳು- 8
೨. ಏಕಾದಶ ರುದ್ರರು- 11
೩. ದ್ವಾದಶಾದಿತ್ಯರು- 12
೪.  ಅನಿರ್ದಿಷ್ಟರು ( ಇವರ ಹೆಸರುಗಳು ಉಲ್ಲೇಖಿತವಾಗಿಲ್ಲ..!) -2
ಇದನ್ನೇ ಯಾಸ್ಕನು ತನ್ನ ‘ನಿರುಕ್ತ’ದಲ್ಲಿ ಸ್ಥಾನಾಪನ್ನತೆಯ ಆಧಾರದಲ್ಲಿ ‘ಪೃಥ್ವೀಸ್ಥಾನಿಗಳು, ಅಂತರಿಕ್ಷಸ್ಥಾನಿಗಳು, ದ್ಯುಸ್ಥಾನಿಗಳು ’ ಎಂದು ಮೂರು ಗುಂಪುಗಳಲ್ಲಿ ವಿಂಗಡಿಸಿದ್ದಾನೆ.ಅಲ್ಲದೇ ಅವರ ಕೃತಿ ವೈಚಿತ್ರ್ಯಗಳೂ ಗಮನೀಯವಾಗಿವೆ. 
ಅಧಿರಾಜ ದೇವತೆಗಳು:- ವರುಣ, ಮಿತ್ರ ಇತ್ಯಾದಿಗಳು
ಯುದ್ಧ ದೇವತೆಗಳು:- ಇಂದ್ರ, ಮರುದ್ಗಣಗಳು, ರುದ್ರ ಇತ್ಯಾದಿಗಳು
ಪ್ರಕಾಶ ದೇವತೆಗಳು :- ವಿಷ್ಣು, ಅಶ್ವಿನೀಕುಮಾರರು ಇತ್ಯಾದಿ
ಯಜ್ಞದೇವತೆಗಳು :- ಅಗ್ನಿ, ಸೋಮ ಇತ್ಯಾದಿಗಳು
ಉಳಿದವೆಂದರೆ ಅಪ್ರಧಾನ ದೇವತೆಗಳು :- ಶ್ರದ್ಧಾ ಮತ್ತು ಇಳಾ
ಏಕದೇವತೋಪಾಸನೆಯ ಮೂಲ ಸಿಗುವುದೇ ನಮಗೆ ಋಗ್ವೇದದ ವರುಣನ ವಿವರಣೆಯಲ್ಲಿ. ಇವನನ್ನು ಎಲ್ಲರಿಗಿಂತ ಪ್ರಧಾನ ದೇವತೆಯೆಂದೇ ಬಿಂಬಿಸಲಾಗಿದೆ. ಈ ವರುಣನಿಗೆ ಮಾನವೀಯ ಆಕೃತಿಯನ್ನಾಗಲೀ ಮನೋಭೂಮಿಕೆಯನ್ನಾಗಲೀ ವೇದಗಳಲ್ಲಿ ಹೇಳಿಲ್ಲ. ಆದ ಕಾರಣ ಮಿತ್ರನೊಂದಿಗೆ ಇವನ ಸ್ತುತಿಗಳು ಸಮ್ಮಿಳಿತಗೊಂಡಿವೆ. ಹಾಗಿದ್ದೂ ವರುಣನೇ ಸರ್ವದೇವಾಧಿಪ, ಸಾಮ್ರಾಟ್..! ಜಗತ್ತಿನ ಸೃಷ್ಟಿ-ಸ್ಥಿತಿ ಕಾರ್ಯಗಳು ದ್ಯುದೇವನಂತೆಯೇ ಇವನಿಗೂ ಹೇಳಲ್ಪಟ್ತಿವೆ. ಸೂಕ್ತಗಳಲ್ಲಿ ಬರುವ ವರ್ಣನೆಗಳ ಪ್ರಕಾರ ವರುಣನು ಕ್ಷತ್ರಿಯರಿಗೆ ಪ್ರಭುತ್ವವನ್ನು ದಯಪಾಲಿಸುವವನು ವರುಣನೇ. ಅವನೇ ಮಹಾಪ್ರಭು, ಅವನಿಂದ ಹೊಮ್ಮಿದ ‘ಮಾಯೆ’ ಯಿಂದಲೇ ವಿಶ್ವದ ಋತುನಿಯಮವು ಕರಾರುವಾಕ್ಕಾಗಿ ನಡೆಯುವುದು. ಧರ್ಮ ನೀತಿಗಳು ಉಳಿದಿರುವುದು, ಪಾರ್ಶ್ವವಾಗಿ ಯಮನ ಕಾರ್ಯವನ್ನು ನಡೆಸುತ್ತಿರುವುದಾಗಿಯೂ ವರ್ಣನೆಯಿದೆ. ಹಾಗಾಗಿ ದುರ್ನೀತಿಯ ಜನರನ್ನು ಶಿಕ್ಷಿಸುವವನೂ ವರುಣನೇ...! ಕೆಲವು ಸೂಕ್ತಗಳಲ್ಲಿ ಅವನನ್ನು ಪಾಪಿಗಳನ್ನು ದಂಡಿಸುವ ದೇವತೆ, ಹಾಗಾಗಿ ಗೂಢಚಾರರನ್ನು ಹೊಂದಿದ್ದು ಎಲ್ಲೆಡೆಯೂ ಅವನ ಚರರು ನೋಡುತ್ತಲೇ ಇರುತ್ತಾರೆ. ಇನ್ನೊಂದು ವಿಶೇಷವೆಂದರೆ ಈ ವರುಣನೇ ಈ ಭೂಮಿಗೆ ಮಳೆಯನ್ನು ಕೊಡತಕ್ಕವನು, ಅಲ್ಲದೇ ಆಕಾಲದಲ್ಲಿ ಕಂಡುಬಂದ ‘ಜಲೋದರ’ ಕಾಯಿಲೆಯನ್ನು ಕಡಿಮೆ ಮಾಡುವ ಸಲುವಾಗಿ ಅವನಿಗೆ ಸೋಮಯಾಜಮಾನ್ಯವನ್ನೂ ಕರುಣಿಸಿದ್ದಾರೆ ಋಷಿಗಳು...! ಋಗ್ವೇದ ಕಾಲದಲ್ಲಿ ಪೌರಾಣಿಕ ಕಥಾ ಹಂದರದ ಪರಿಚಯ ಅಷ್ಟಾಗಿ ಕಾಣದಿರುವುದು ಈ ವರುಣನೇ ಮುಂದೆ ಮಿತ್ರ ಎಂದೂ ಕರೆಯಲ್ಪಟ್ಟು ವರುಣನಿಗೆ ಪ್ರತಿದ್ವಂದ್ವಿಯಾಗಿ ಮಾರ್ಪಟ್ಟಿದ್ದು ಕಂಡುಬರುತ್ತದೆ. ಮುಂದೆ ಮಿತ್ರನು ಹಗಲಿನ ದೇವತೆ- ಸೂರ್ಯನೆನ್ನಿಸಿಕೊಂಡರೆ ವರುಣನು ರಾತ್ರಿ ದೇವತೆಯಾಗಿ ಚಂದ್ರನಾಗಿ ಮಾರ್ಪಡುತ್ತಾನೆ.  ಹೀಗೆ ಚಂದ್ರ ತತ್ವವನ್ನು ಆರೋಪಿಸುವಾಗಲೂ ಜಲ ಸಂಬಂಧ ಬಿಟ್ಟು ಹೋಗುವುದಿಲ್ಲ. 
ಮುಂದೆ ಬರ ಬರುತ್ತಾ ಇದೇ ವರುಣನೇ ಯಜ್ಞ ಕಾರ್ಯಗಲಲ್ಲಿ ತನ್ನ ಸ್ಥಾನವನ್ನು ಚಂದ್ರನಿಗೆ ಬಿಟ್ಟುಕೊಡುತ್ತಾನೆ ಮತ್ತು ರಾಜಸೂಯ, ಮುಂತಾದ ಯಜ್ಞಗಳಲ್ಲಿ ಅವನ ಸ್ಥಾನವನ್ನು ಇಂದ್ರನು ಆಕ್ರಮಿಸುತ್ತಾನೆ. ಈ ತೆರನಾದ ಸ್ಥಾನ ಪಲ್ಲಟ ವಿಧಾನವನ್ನು ಇತ್ತೀಚಿನ ಸಂಶೋಧಕರು ಬಹು ಆಸಕ್ತಿಯಿಂದ ಗಮನಿಸಿ ತಮ್ಮ ವರುಣನ ಕುರಿತಾದ ಜಿಜ್ಞಾಸೆಯನ್ನು ತೋರ್ಪಡಿಸಿದ್ದಾರೆ( ಜಾನ್ ಕೀತ್,  ಓಲ್ಡೇನ್ ಬರ್ಗ್, ಹೀಲ್ ಬ್ರಾಂಡ್ ಓಟ್ಟೋ ಇತ್ಯಾದಿಗಳು)ಏನೇ ಆದರೂ ವರುಣನ ‘ಸಾಮ್ರಾಟ್’ ಪದವಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ...! ಅತಿ ಪ್ರಾಚೀನ ಮತ್ತು ವೇದ ವರ್ಣಿತರುಗಳಲ್ಲಿ ಪ್ರಥಮ ದೇವತೆಯೆಂಬುದನ್ನು ಎಲ್ಲರೂ ಸಮ್ಮತಿಸುತ್ತಾರೆ. 
...................................................................................................
ಋಗ್ವೇದದ ಸೂಕ್ತಗಳನ್ನು ಕೂಲಂಕಷವಾಗಿ ಗಮನಿಸುತ್ತಾ ಹೋದರೆ ನಮ್ಮ ಅರಿವಿಗೆ ಬರುವುದು ‘ಮಿತ್ರ’ನ ಕುರಿತಾದ ವಿವರಣೆಗಳು. ಆದರೆ ಅವನ ಸ್ಥಾನಾಪನ್ನತೆಯು ಕ್ಷೀಣವಾದುದು ‘ಮಿತ್ರಸೂಕ್ತ’ವೆಂದು ಕರೆಯಲ್ಪಡುವ ಒಂದೇ ಒಂದು ಸೂಕ್ತದಲ್ಲಿ ದೊರೆತ ವಿವರಣೆಯಷ್ಟೇ ಆಗಿದೆ. ಬಹುಶಃ ಹಿಂದೆ ತಿಳಿಸಿದಂತೆ ವರುಣನ ಸ್ಥಾನವನ್ನು ಆಕ್ರಮಿಸಿದ ಈ ದೇವತೆಯು ಹಿಂದೆ ಉತ್ತಮ ಸ್ಥಾನದಲ್ಲಿದ್ದವನು ಎಂಬುದನ್ನು ಸೂಚಿಸುತ್ತದೆ. ಇಲ್ಲಿ ಮಿತ್ರನ ನಂತರ ವರುಣನೋ ಅಥವಾ ವರುಣನಾದ ಮೇಲೆ ಮಿತ್ರನೋ ಎಂಬುದು ಇಂದಿಗೂ ಬಗೆಹರಿಯದ ವಿಚಾರವಾಗಿಯೇ ಇದೆ. ಏಕೆಂದರೆ ಕೆಲ ಋಕ್ಕುಗಳಲ್ಲಿ ಮಿತ್ರಾನಂತರದಲ್ಲಿ ವರುಣ ಬಂದಂತೆ ತೋರುತ್ತದೆ.
ವಿಶ್ವದ ಸೃಷ್ಟಿ, ಋತ-ಸತ್ಯ, ನ್ಯಾಯ ನಿರ್ಣಯಾದಿ ಕಾಯಕಗಳಲ್ಲಿ ಈ ಮಿತ್ರನ ಪಾತ್ರ ಮಹತ್ವದ್ದು ಎಂದೂ ಅದಕ್ಕೆ ಈ ಮಿತ್ರನು ವರುಣನೊಡಗೂಡಿಯೇ ಆ ಕೆಲಸಗಳನ್ನು ನಿರ್ವಹಿಸುತ್ತಾನೆಂದೂ ವರ್ಣಿಸಲಾಗಿದೆ. ಒಂದು ಅಚ್ಚರಿಯ ವಿಚಾರವೆಂದರೆ, ‘ಇರಾನ್’ ನಲ್ಲಿ ಅವರ ಪ್ರಾಕ್ಕಥನಗಳಲ್ಲಿ ಬರುವ ಇದೇ ಕಾಯಕಗಳನ್ನು ನಿರ್ವಹಿಸುತ್ತಾನೆಂದು ವರ್ಣಿಸಲ್ಪಡುವ ದೇವತೆಯ ಹೆಸರೂ ‘ಮಿಥ್ರ್’ ಇದಕ್ಕೆ ಹೊಂದಿಕೊಂಡಂತೆ ವರುಣನಲ್ಲಿ ಉಗ್ರಾಂಶವನ್ನೂ ಮಿತ್ರನಲ್ಲಿ ಸಾತ್ವಿಕಾಂಶಗಳನ್ನೂ ಆರೋಪಿಸಿರುವುದು ಈ ಎರಡು ದೇವತೆಗಳು ಸಮಾನ ಕಾರ್ಯಕ್ಕೆ ನಿಯೋಜಿಸಲ್ಪಟ್ಟವರೆಂಬುದನ್ನು ತಿಳಿಸುತ್ತದೆ.
ಆದಿತ್ಯರು :- ಈ ಮಿತ್ರ ಮತ್ತು ವರುಣರೂ ಅದಿತಿಯ ಪುತ್ರರು...! ಹೀಗೆ ಇವರನ್ನೂ ಒಳಗೊಂಡಂತೆ ಋಗ್ವೇದದ ಪಾಥಮಿಕ ಸೂಕ್ತಗಳಲ್ಲಿ ಕಂಡುಬರುವ ಆದಿತ್ಯರ ಸಂಖ್ಯೆ ಕೇವಲ ಏಳು...! ಅಥವಾ ಎಂಟು...! ಮುಂದೆ ಬ್ರಾಹ್ಮಣದ ಕಾಲದಲ್ಲಿ ಅವನ್ನು 12 ಕ್ಕೆ ತಂದು ನಿಲ್ಲಿಸಲಾಯಿತು. ಅದರ ವಿವರಣೆಯನ್ನು ಮುಂದೆ ಸಂದರ್ಭಾನುಸಾರ ವಿವೇಚಿಸೋಣ. ಏಕೆಂದರೆ ಅಲ್ಲಲ್ಲಿ ಈ ಆದಿತ್ಯರ ನಾಮಾಂಕಿತಗಳು ಬದಲಾಗುತ್ತಲೇ ಸಾಗಿದೆ.ಏಕೆಂದರೆ ಸೂಕ್ತಗಳಲ್ಲಿ ಬರುವ ‘ಮಿತ್ರ- ಅರ್ಯಮ’ ಎಂಬ ಈರ್ವರೂ ವರುಣನ ನಂತರದ ಕಾಲಘಟ್ಟದಲ್ಲಿ ಬರುವ ದೇವತೆಗಳು..! ಈ ‘ಅರ್ಯಮ’ ಇರಾನೀ ಸಾಹಿತ್ಯದಲ್ಲಿ ‘ಅರ್ಯಮನ್’..! ಹೇಗೆ ಇಲ್ಲಿ ಮಿತ್ರ ವರುಣ ಅರ್ಯಮರು ಎಲ್ಲರೂ ಆದಿತ್ಯಾಂಶಿಗಳೋ ಅಂತೆಯೇ ಇರಾನೀ ‘ಅರ್ಯಮನ್’ ಕೂಡಾ ಸೂರ್ಯಾಂಶನು..! ಆ ಕಾಲದ ವಿವಾಹ ವಿಧಿಗಳಲ್ಲಿ ( ಪೂರ್ವದ ಕಾಲಘಟ್ಟದಲ್ಲಿ ವಿವಾಹ ಎಂಬ ವ್ಯವಸ್ಥೆಯೇ ಇರಲಿಲ್ಲ..!), ಆತಿಥ್ಯ ಸಂದರ್ಭಗಳಲ್ಲಿ ಈ”ಅರ್ಯಮಾ’ ಎಂಬವನು ಪ್ರಧಾನ ದೇವತೆಯಾಗಿರುತ್ತಾನೆ. ಅಷ್ಟೇ ಅಲ್ಲ, ಅದೃಷ್ಟವನ್ನು ತಮ್ಮ ನಂಬಿಕೆಯ ಇನ್ನೊಂದು ಭಾಗವನ್ನಾಗಿ ಮಾಡಿಕೊಳ್ಳುತ್ತಾ ಸಾಗಿದ ಋಗ್ವೇದ ಸಂಸ್ಕೃತಿಯಲ್ಲಿ ಅದಕ್ಕೊಬ್ಬ ದೇವತೆ ‘ಅಂಶ’ ಮತ್ತು ನೀತಿಯನ್ನು ಸಾರುವ ದೇವತೆಯಾದ ‘ದಕ್ಷ’  ಇವರೆಲ್ಲ ಆಕಾಲದ ನೀತಿ, ಸಾಮಾಜಿಕ ಕಟ್ಟುಪಾಡುಗಳನ್ನು ನಿಯಂತ್ರಿಸಬಲ್ಲ ದೇವತೆಗಳೆಂದು ವರ್ಣಿಸಲ್ಪಟ್ಟಿವೆ. ಈ ಭಾಗವನ್ನು ‘ಲೋಕ ಶಾಸನ’ ಎಂಬ ಅರ್ಥದಲ್ಲಿ ವೇದ ತಿಳಿಸುತ್ತಿದೆ. ಇಲ್ಲಿ ಒಂದು ಜಿಜ್ಞಾಸೆ ಪೂರ್ವ ವಿದ್ವಾಂಸರುಗಳಿಗೂ ಮೂಡಿದ್ದು ಏನೆಂದರೆ ‘ಸಪ್ತಾದಿತ್ಯ’ ಸೂತ್ರಗಳು ಅಂದಿನ ಗ್ರಹ ಕೂಟಗಳಾಗಿ 7 ಗ್ರಹಗಳನ್ನು ಸೂಚಿಸಲೂ ಸಾಕು ಎಂಬುದು.ಆದರೆ ಕೆಲ ವಿದ್ವಾಂಸರು ಶಾಬ್ದಿಕ ವಿವರಣೆಯ ಪ್ರಕಾರ ಅದನ್ನು ಒಪ್ಪುತ್ತಿಲ್ಲ. ಏಕೆಂದರೆ ‘ಅದಿತಿ’ ಎಂಬುದು ‘ದಿತ್-ಬಂಧನೇ’ ಎಂದು ವಿಭಾಗಿಸಲ್ಪಡುವುದರಿಂದ ಬಂಧನವಿಲ್ಲದ ಸ್ಥಿತಿ ಎಂಬರ್ಥ ಸ್ಫುರಿಸುತ್ತದೆ. ಹಾಗಾಗಿಯೇ ಅದಿತಿಯನ್ನು ‘ದೇವ ಮಾತಾ’ ಸ್ಥಾನಕ್ಕೇರಿಸಿದ್ದು..!
ವೇದೋಲ್ಲಿಖಿತವಾದ ದೇವತೆಗಳಲ್ಲಿ ನಂತರದ ಸ್ಥಾನ ‘ಮರುದ್ಗಣ’ಗಳದ್ದು. ಇವರು ಯಾವಾಗಲೂ ತಾರುಣ್ಯಪೂರ್ಣಾವಸ್ಥೆಯಲ್ಲಿರುವವರು (ಮರ್ಯ) ಮತ್ತು ರುದ್ರನ ಪುತ್ರರು. ವೇದ ಸೂಕ್ತಗಳಲ್ಲಿ ಇವರ ವರ್ಣನೆ ಅನುಪಮ ಕಾವ್ಯ ಶಯ್ಲಿಯಿಂದ ಕೂಡಿದೆ ಎನ್ನಬಹುದು. ಕಂದುಬಣ್ನದ ಕುದುರೆಗಳನ್ನು ಹೊಂದಿದ ಚಿನ್ನದ ರಥಗಳಲ್ಲಿ ಇವರು ಬರುತ್ತಾರೆ. ಈ ಭೂಮಿಯ ಮೇಲೆ ಮಳೆಯನ್ನು ಸುರಿಸುವವರು, ಗಾಳಿಯನ್ನು ಬೀಸುವವರು, ಮತ್ತು ಸುಶ್ರಾವ್ಯವಾದ ಸಂಗೀತವನ್ನು ಹಾಡುತ್ತಾ ಬರುವವರೂ ಆಗಿರುತ್ತಾರೆ. ಅಂತೆಯೇ ಮಿಂಚು ಎಂಬ ಹೊಸ ಬೆಳಕಿನ ವೈಚಿತ್ರ್ಯವೂ ಇವರಿಂದಲೇ ಉದ್ಭವಿಸಿದ್ದು. ಏಕೆಂದರೆ ಇವರ ಆಭರಣಗಳೇ ಅದಕ್ಕೆ ಕಾರಣವಂತೆ...! ಏನೇ ಇದ್ದರೂ ಇವರು ‘ಇಂದ್ರ’ನ ನಾಯಕತ್ವವವನ್ನು ಒಪ್ಪಿ ಅವನ ಸಹಚರರಾಗಿ ಯುದ್ಧಾದಿಗಳಲ್ಲಿ ತೊಡಗಿಸಿಕೊಳ್ಳುವವರಾಗುತ್ತಾರೆ.
ರುದ್ರ :- ಋಗ್ವೇದದಲ್ಲಿ ಇವನ ಸ್ಥಾನ ಗೌಣ. ಆದರೂ ರುದ್ರನ ಬಿಲ್ಲು-ಬಾಣಗಳ ವರ್ಣನೆಗಳು ಅಲ್ಲಲ್ಲಿ ಬರುತ್ತವೆ. ಹಾಗಾಗಿ ಈ ರುದ್ರನೆಂಬವನು ಯಾವಾಗಲೂ ಉಗ್ರರೂಪಿ ಎಂಬುದು ತಿಳಿದುಬರುತ್ತದೆ. ಕಾಡುಗಳಲ್ಲಿಯೇ ಅವನ ವಾಸ, ಮತ್ತು ಯಾರನ್ನು ‘ಪಶುಪತಿ’ ಎಂದು ಹೇಳುತ್ತಾರೋ ಅವನೇ ರುದ್ರನು,...! ಸೂಕ್ತಗಳಲ್ಲಿ ಕಂಡುಬರುವಂತೆ ಇವನು ‘ನಿಷೇಧಗಳ ದೇವತೆಯಾಗಿದ್ದಾನೆ’..! ಈ ಪಶುಪತಿಯನ್ನೇ ಮುಂದೆ ‘ಯಜುರ್ವೇದ’ದಲ್ಲಿ ‘ಮಹಾದೇವ’, ‘ಶಿವ’ ಎಂದು ಬಣ್ಣಿಸಲಾಗಿದೆ. ಯಜ್ಞಗಳಲ್ಲಿ ಇವನಿಗೆ ಬೇರೆಯದೇ ಆದ ಹವಿರ್ಭಾಗವನ್ನೂ ನೀಡಲಾಗುತ್ತಿತ್ತು. ಏಕೆಂದರೆ ಇವನು ನಿಯಾಮಕನೂ, ರೋಗ ನಿವಾರಕನೂ, ಅನ್ಯಾಯಗಳನ್ನು ನಿಯಂತ್ರಿಸುವವನೂ ಆಗಿದ್ದನು.
ಅಶ್ವಿನೀ ದೇವತೆಗಳು :- ಇವರು ಮೂಲದಲ್ಲಿಯೇ ಅವಳಿಗಳು. ಎಲ್ಲ ಕಡೆಗಳಲ್ಲಿಯೂ ದ್ವಿವಚನದಲ್ಲಿಯೇ ಇವರನ್ನು ಹೆಸರಿಸಲಾಗುತ್ತದೆ. ಇವರು ‘ದ್ಯುದೇವ’ನ ಪುತ್ರರು. ಪಕ್ಷಿಗಳಿಂದ ಎಳೆಯಲ್ಪಡುವ ರಥದಲ್ಲಿ ಒಟ್ಟಿಗೇ ಕುಳಿತು ಆಕಾಶದಲ್ಲಿ ಸಂಚರಿಸುವವರು..! (ಆಕಾಶಗಮನದ ಕಲ್ಪನೆಯ ಕುರಿತು ಜಿಜ್ಞಾಸೆಗೊಳಪಡಬೇಕಾದ ಅನೇಕ ವಿಚಾರಗಳು ಈ ಅಶ್ವಿನೀದೇವತೆಗಳ ಸೂಕ್ತಗಳಲ್ಲಿ ವರ್ಣನೆಯಿರುವುದು) ಅರುಣೋದಯದಲ್ಲಿ ಇವರನ್ನು ಕಾಣುತ್ತೇವೆ. ಸುಂದರರೂ, ಶೀಘ್ರಗಾಮಿಗಳೂ ಆಗಿದ್ದಾರೆ. ಇವರಿಗೆ ಕೆಲವು ಸೂಕ್ತಗಳಲ್ಲಿ ‘ದಸ್ರಾ’- ‘ನಾಸತ್ಯ’ ಎಂಬ ನಾಮಾಂತರಗಳನ್ನೂ ಹೇಳಿದ್ದಾರೆ. ಇವರು ರೋಗ ಚಿಕಿತ್ಸಕರು ಎಂಬ ಬಹುವಾದ ವಿವರಣೆ ಕಂಡುಬರುತ್ತದೆ. ಏಕೆಂದರೆ ‘ಚ್ಯವನ’ನ ಮುಪ್ಪನ್ನು ಹೋಗಲಾಡಿಸಿ ತರುಣನನ್ನಾಗಿಸಿದವರು ಈ ಅಶ್ವಿನೀದೇವತೆಗಳು ಎಂದು ನಂಬಲಾಗಿದೆ.ಒಂದು ಸೂಕ್ತದಲ್ಲಿ ಕಥೆಯ ರೂಪದಲ್ಲಿ ಕಾಣುವಂತೆ ‘ಭುಜ್ಯು’ವು ಸಮುದ್ರದಲ್ಲಿ ಮುಳುಗುತ್ತಿರುವಾಗ ಅವನನ್ನು ಮೇಲಕ್ಕೆತ್ತಿ ಬದುಕಿಸಿದವರು ಇವರು. ಇವರ ಸೂಕ್ತಗಳಲ್ಲೇ ನಮಗೆ ‘ಮಧು’ ಎಂಬ ಪೇಯದ ವಿಚಾರ ತಿಳಿದುಬರುವುದು....! ‘ದಧ್ಯಂಚ’ ನೆಂಬವನ ಸಹಾಯದಿಂದ ಈ ಮಧುವನ್ನು ತಯಾರಿಸಿ ದೇವತೆಗಳಿಗೆ ಹಂಚಿದರು ಎಂಬುದು ತಿಳಿದುಬರುತ್ತದೆ. ಹಾಗಾಗಿ ಇವರು ಅತ್ಯಂತ ಜನಪ್ರಿಯ ದೇವತೆಗಳೆನ್ನಿಸಿದರಂತೆ...!
ವಿಷ್ಣು:- ವಿಷ್ಣುವಿನ ಕಲ್ಪನೆಯೇ ಋಗ್ವೇದದ ಏಳು ಮತ್ತು ಒಂಭತ್ತನೇ ಮಂಡಲದಲ್ಲಿ ಬರುತ್ತದೆ. ಹೇಗೆ ಇವನನ್ನು ಜಗನ್ನಿಯಾಮಕ ಎಂದು ಕರೆದರು ಎಂಬುದಕ್ಕೂ ವಿವರಣೆಗಳು ದೊರೆಯುತ್ತವೆ. ಅದಲ್ಲದೇ ‘ಮೂರುಲೋಕಗಳು’ ಎಂಬ ಕಲ್ಪನೆಯೂ ಇವನಿಂದಲೇ ತಿಳಿಯುತ್ತದೆ. ಏಕೆಂದರೆ ಇವನು ಮೂರು ಲೋಕಗಳನ್ನೂ ಅಳೆಯುವ  ಇವನ ಸಾಹಸ ವಿವರಗಳು ಋಗ್ವೇದದಲ್ಲಿ ಉಕ್ತವಾಗಿದೆ.  ಲೋಕವನ್ನಳೆಯುವಾಗ ಮೂರು ಕ್ರಮಗಳನ್ನು ಅನುಸರಿಸಿದ್ದರೂ ಮೊದಲೆರಡು ಕ್ರಮಗಳು ಸಾಮಾನ್ಯ ಕಣ್ಣಿಗೆ ಕಾಣಿಸುವಂತಿದ್ದು ಮೂರನೇಯ ಕ್ರಮವು ಅದೃಶ್ಯವಾದುದಾಗಿದೆ ಎಂದು ವಿವರಣೆ ದೊರೆಯುತ್ತದೆ. ಆದರಿಂದಲೇ ಇವನಿಗೆ ‘ಉರುಗಾಯ’, ‘ಉರುಕ್ರಮ’ ಎಂಬ ಬಿರುದುಗಳಿವೆಯಂತೆ...! ಈ ವಿಷ್ಣುವು ‘ಇಂದ್ರ’ನ ಮಿತ್ರನಾಗಿರುತ್ತಾನೆ. ಅವನಿಗಾಗಿ ‘ಮಧು’ವನ್ನು ತಯಾರಿಸಿಕೊಡುತ್ತಾನೆ ಅದು ವಿಶೇಷವಾದುದಾಗಿದೆ ಏಕೆಂದರೆ ಅವನ ಪಾದದಲ್ಲಿ ಮಧುವಿನ ‘ಉತ್ಸ’(ಬುಗ್ಗೆ) ರೂಪವಾಗಿ  ಸೋಮವು ಜನಿಸುತ್ತದೆ..!
ಪೂಷನ್:- ಈ ದೇವತೆಯು ಜನರಿಗೆ ಮಾರ್ಗ ದರ್ಶಕನು. ದಾರಿ ತಪ್ಪಿದ ಪ್ರಾಣಿಗಳಿಗೂ ಇವನು ಮಾರ್ಗ ದರ್ಶನ ಮಾಡುತ್ತಾನೆ. ಎಲ್ಲರಿಗೂ ಸಮೃದ್ಧಿಯನ್ನು ಕೊಡಬಲ್ಲ ದೇವತೆ ಪೂಷನ್..!
ಸೂರ್ಯಾಂಶೀಯ ದೇವತೆಗಳು:- 1.-ಸೂರ್ಯ- ಇವನು ಒಮ್ಮೆ ಹಕ್ಕಿಯಂತೆಯೂ ಇನ್ನೊಮ್ಮೆ ಜಡದಂತೆಯೂ...!? ಕಾಣಿಸಿಕೊಳ್ಳುತ್ತಾನೆ. ಆದರೂ ಇವನಿಗೆ ‘ದೇವ’ ಪಟ್ಟವಂತೂ ಇದ್ದೇ ಇದೆ..! 2.-ಸವಿತೃ- ಇವನನ್ನು ‘ಸುವರ್ಣಪಾಣಿ’ ಎಂದಿರುವುದು ಅರ್ಥವಾಗುವುದಿಲ್ಲವಾದರೂ ಈತನು ಸಕಲ ಜೀವ ಜಂತುಗಳ ಚೇತನಾ ಶಕ್ತಿ ಎಂದು ವಿವರಿಸಲಾಗಿದೆ..! 

ಇದಲ್ಲದೇ ಅಚ್ಚರಿಯ ಅಂಶಗಳೆಂದರೆ, ಈ ಚೈತನ್ಯಗಳನ್ನು ನೀಡುವಲ್ಲಿನ ವೈವಿಧ್ಯವನ್ನು ಗಮನಿಸಿ ಅವನೊಂದಿಗೆ ‘ಅಜೈಕಪಾತ್’ ‘ವಿವಸ್ವಾನ್’ ಮತ್ತು ‘ರೋಹಿತ’ ಎಂಬವರನ್ನೂ  ಸೂರ್ಯಾಂಶಿಗಳೆಂದು ಗುರುತಿಸಿದೆ.
ಉಷಸ್ :- ಋಗ್ವೇದದಲ್ಲಿ ವರ್ಣಿಸಲ್ಪಟ್ಟ ಪ್ರಥಮ ಸ್ತ್ರೀ ದೇವತೆಯೆಂದರೆ ‘ಉಷಸ್’..! ಇಲ್ಲಿಂದಲೇ ಅನೇಕ ಸ್ತ್ರೀದೇವತೆಗಳಾದ ‘ರಾತ್ರಿ ದೇವಿ’, ‘ನಿಶಾ ದೇವಿ’ ಮುಂತಾದವರು ಕಾಣಿಸಿಕೊಳ್ಳುತ್ತಾರೆ..! ಅಪ್ರತಿಮ ಸೌಂದರ್ಯದ ವರ್ಣನೆಯೂ ಇಲ್ಲಿಂದಲೇ ಪ್ರಾರಂಭವಾಗುತ್ತದೆ..! ಇವಳು ದ್ಯುದೇವನ ಮಗಳು. ಸೂರ್ಯನೊಂದಿಗೆ ಗುರುತಿಸಿಕೊಳ್ಳುತ್ತಾಳೆ..!
ದ್ಯಾವಾಪೃಥಿವೀ :- ದ್ಯುದೇವನು ಈ ಎಲ್ಲ ದೇವತಾ ಕುಟುಂಬಕ್ಕೆ ಪಿತೃ ಸ್ಥಾನದಲ್ಲಿರುವವನು  ಹಾಗಾಗಿ ಇವನು ಪೃಥಿವೀ ದೇವಿಯೊಡನೆ ಯಾವಾಗಲೂ ಗುರುತಿಸಿಕೊಂಡಿದ್ದು ಈ ‘ದ್ಯಾವಾಪೃಥಿವೀ’ ಎಂಬ ಹೆಸರಿನಿಂದ. ವೇದದಲ್ಲಿ ಈ ದೇವತಾಯುಗ್ಮಕ್ಕೆ ‘ರೋದಸೀ’ ಎಂಬ ನಾಮಾಂತರವೂ ಹೇಳಲ್ಪಟ್ಟಿದೆ. ಪೃಥಿವೀಯು ಸಕಲರನ್ನೂ, ಸಕಲವನ್ನೂ ಸಾಕುತ್ತಿರುವವಳು....!

ವಾಯು:- ವಾಯುವೆಂದರೆ ಅಗೋಚರವೆಂದೂ ಗಮ್ಯವೆಂದೂ ಚಲನ ಶೀಲವೆಂದೂ ಗುರುತಿಸಲಾದ ‘ಗಾಳಿ’ಯ ದೇವತಾ ಸ್ವರೂಪವು. ಆದರೂ ಇವನಿಗೆ ಮಾನವ ಸ್ವರೂಪವನ್ನೇ ಹೇಳಲಾಗಿದೆ..! ಇವನೂ ಇಂದ್ರನೂ ಪರಸ್ಪರ ಮಿತ್ರರು..!
ಪರ್ಜನ್ಯ:- ಇವನೂ ವೇದೋಕ್ತವಾದ ಓರ್ವ ದೇವತೆ...! ಅಪ್ರತಿಮ ಶಕ್ತಿವಂತನೂ ಮಳೆ-ಮೋಡ-ಬಿರುಗಾಳಿಗಳ ದೇವತೆಯಾಗಿದ್ದಾನೆ. ಎಲ್ಲ ಸಸ್ಯಗಳ ಜನಕನೂ, ಜೀವಿಗಳ ಉತ್ಪಾದಕನೂ ಪರ್ಜನ್ಯನೇ ಆಗಿದ್ದಾನೆ...!
ಸ್ತ್ರೀ ದೇವತೆಗಳು :- ವೇದದಲ್ಲಿ ಆಗಲೇ ಹೇಳಿದಂತೆ ಮೂಲದಲ್ಲಿ ಯಾವ ಸ್ತ್ರೀ ದೇವತೆಯ ವರ್ಣನೆ ಬಾರದಿದ್ದರೂ ಹಿಂದಿನ ದೇವತೆಗಳಿಗೆಲ್ಲ ಮಾತೃ ರೂಪಗಳನ್ನು ಕಲ್ಪಿಸುವಾಗ ಅನೇಕ ಸ್ತ್ರೀ ದೇವತೆಗಳ ಹೆಸರುಗಳು ಬರುತ್ತವೆ. ಅವರಲ್ಲಿ ಉಷಸ್ ಮತ್ತು ಅದಿತಿ ಗಳಲ್ಲದೇ ಶ್ರೀ, ಪುರಂಧ್ರೀ, ವಾಕ್, ಧಿಷಣಾ, ಇಳಾ ಮುಂತಾದ ಹನ್ನೆರಡು ಸ್ತ್ರೀದೇವತೆಗಳ ಹೆಸರುಗಳಿವೆ. ಅದಲ್ಲದೇ ಇಂದ್ರಾಣೀ ಎಂಬ ದೇವತೆಯೂ ಪ್ರಸ್ತಾಪಿಸಲ್ಪಟ್ಟಿದ್ದಾಳೆ... ( ಶಚಿ ಇಂದ್ರನ ಪತ್ನಿ ಎಂಬ ಉಲ್ಲೇಖ ಕಂಡುಬರುವುದಿಲ್ಲ..!)
ದ್ವಂದ್ವ ದೇವತೆಗಳು :- ವೇದದಲ್ಲಿ ಅನೇಕ ದೇವತೆಗಳು ಅಲ್ಲ..ಬಹುತೇಕ ದೇವತೆಗಳು ಯುಗ್ಮಗಳಾಗಿಯೇ ಗುರುತಿಸಲ್ಪಡುತ್ತಾರೆ. ಮಿತ್ರಾವರುಣ, ದ್ಯಾವಾಪೃಥಿವೀ, ಇಂದ್ರಾವಿಷ್ಣೂ, ಇಂದ್ರಾಗ್ನೀ..... ಮುಂತಾಗಿ
ದೇವತಾ ಗಣಗಳು:-  ಆದಿತ್ಯರು, ಮರುದ್ಗಣಗಳು, ರುದ್ರಗಣಗಳು, ಮುಂತಾದವು ಗಣ ರೂಪದ ದೇವತೆಗಳು( ಗಣ-ಗುಂಪು) ಇವುಗಳಲ್ಲಿ ‘ವಿಶ್ವೇದೇವ ಗಣ’ ಅತ್ಯಮ್ತ ಹರವಾದುದಾಗಿದೆ. ಈ ಎಲ್ಲ ಗಣಗಳನ್ನೂ ವಿಶೇಷವಾಗಿ ಸ್ತೋತ್ರಗೈಯ್ಯುವ ಅನೇಕ ಸೂಕ್ತಗಳು ದೊರೆಯುತ್ತವೆ. 
ಋಭುಗಳು:- ಇವರು ಮೂರು ಜನ ( ಹೆಸರು ಉಲ್ಲೇಖ ಇದ್ದಿರಬಹುದಾದರೂ ಆ ಋಕ್ಕುಗಳ ಉಪಲಬ್ದಿಯಿಲ್ಲ) ಇವರು ದೇವತೆಗಳ ಸಾರಥಿಗಳು.
ಋಗ್ವೇದದ ಅಂತ್ಯ ಕಾಲಘಟ್ಟದಲ್ಲಿ ಬಂದ ದೇವತಾ ಮಂತ್ರಗಳಲ್ಲಿ ಅಪ್ಸರೆಯರು, ಗಂಧರ್ವರು ಹಾಗೂ ಯಕ್ಷರು ಎಂಬ ದೇವತಾ ಗಣಗಳು ಸ್ತೋತ್ರಮಾಡಲ್ಪಟ್ಟಿದ್ದಾರೆ..! ಅಪ್ಸರೆಯರು ಗಂಧರ್ವರ ಪತ್ನಿಯರೆಂದೂ ಇಂದ್ರನರಮನೆಯ ನಾಟ್ಯಾಂಗನೆಯರೆಂದೂ ವರ್ಣಿತವಾಗಿದೆ. ( ಇಲ್ಲಿಂದಲೇ ನಮಗೆ ಭರತ ಮುನಿಯ ನಾಟ್ಯಶಾಸ್ತ್ರದ ಮೂಲ ಸ್ರೋತ ಸಿಗುವುದು..!) ಗಂಧರ್ವರು ಶಬ್ದದ ಅಧಿದೇವತೆಗಳು..! ಮೇಘ, ಜಲ, ಇತ್ಯಾದಿಗಳ ರಕ್ಷಕರು. ಇವರು ಕಳ್ಳರುಕೂಡಾ ..! ಏಕೆಂದರೆ ಇಂದ್ರನ ಉಪಭೋಗಕ್ಕಿರುವ ಸೋಮವನ್ನೂ ಜಲವನ್ನೂ ಕದ್ದೊಯ್ಯುತ್ತಾರೆ ಎಂಬ ವರ್ಣನೆ ದೊರೆಯುತ್ತದೆ
ಈ ಮೇಲಿನ/ಹಿಂದಿನ ದೇವತೆಗಳ ವರ್ಣನೆ ಕೇವಲ ಸ್ತೋತ್ರಾತ್ಮಕವೆಂದು ಕೈಬಿಡುವಂತಿಲ್ಲ. ಇಲ್ಲಿ ಬರುವ ಅನೇಕ ದೇವತೆಗಳ ಗುಣವಿಶೇಷಗಳಲ್ಲಿ ವೈಜ್ಞಾನಿಕ ಅಂಶಗಳ ಮಹಾದಧಿ ಇದೆ... ಸಾಂದರ್ಭಿಕವಾಗಿ ವಿವರಣೆಯಲ್ಲಿ ನೋಡೋಣ.

ಯಜುರ್ವೇದ:
ಯಜುರ್ವೇದ ಸಂಹಿತೆಗಳು:- ಕೇವಲ ಯಜ್ಞದ ದೃಷ್ಟಿಯಿಂದ ಅಧ್ವರ್ಯುವಿನ ಉಪಯೋಗಕ್ಕಾಗಿ ಇರುವ ನಿಯಮಗಳ ಸಂಗ್ರಹವೇ ಈ ಯಜುರ್ವೇದ ಸಂಹಿತೆಯ ಮುಖ್ಯಾಂಶವಾಗಿದೆ. ಈಗಾಗಲೇ ತಿಳಿಸಿದಂತೆ ಛಂದೋರೂಪವಾದ ಮಂತ್ರಕ್ಕೆ ‘ಋಕ್’ ಎಂಬ ಹೆಸರಿನಿಂದ ಹೇಗೆ ಕರೆಯುತ್ತಾರೆಯೋ ಹಾಗೆಯೇ ಗದ್ಯರೂಪಾತ್ಮಕವಾದ ಯಜುರ್ವೇದೀಯ ವಚನಗಳಿಗೆ ‘ಯಜುಸ್’ ಅಥವಾ ‘ಬ್ರಾಹ್ಮಣ’ ಎಂಬ ಸಂಜ್ಞೆಯಿಂದ ಸೂಚಿಸುತ್ತಾರೆ. “ಅನಿಯತಾಕ್ಷರಾವಸಾನೋ ಯಜುಃ”..... “ಗದ್ಯಾತ್ಮಕೋ ಯಜುಃ” .... ಎಂಬ ಅನೇಕ ವಿವರಣೆಗಳು ಇದನ್ನು ತಿಳಿಸಿಕೊಡುತ್ತವೆ. ಮುಂದೆ ‘ಗೃಹ್ಯ’ ಹಾಗೂ ‘ಶ್ರೌತ’ ಸೂತ್ರಗಳು ವಿವರವಾಘಿ ಹೇಳುವ ಕರ್ಮಗಳ ಮೂಲರೂಪಗಳುಅತಿ ಪ್ರಾಚೀನವಾದ ‘ಯಜುರ್ವೇದ’ ದಲ್ಲಿಯೇ ದೊರಕುತ್ತದೆ..!ಉಪನಯನಾದಿ ಗೃಹ್ಯ ಸಂಸ್ಕಾರಗಳನ್ನೂ, ಶ್ರಾದ್ಧಾದಿ ಅಪರ ಕರ್ಮಗಳನ್ನೂ ಆಚರಿಸಲು ಒಬ್ಬ ಪುರೋಹಿತನ ನೆರವು ಸಾಕು, ಆದರೆ ಸೋಮಯಾಗಾದಿಗಳನ್ನೂ, ರಾಜಸೂಯಾದಿ ಯಜ್ಞಗಳನ್ನೂ ನಡೆಸಲು ಅನೇಕ ಬಗೆಯ ...? ಪುರೋಹಿತರುಗಳ ಅವಶ್ಯಕತೆಯಿದೆ. ಇವನ್ನೇ ‘ಶ್ರೌತ’ಕರ್ಮಗಳು ಎಂದು ತಿಳಿಸುವುದರೊಂದಿಗೆ ಈ ಎರಡೂ ಕರ್ಮಾಚರಣೆಗಳಿಗೂ ಮುಖ್ಯವಾದ ಗದ್ಯ-ಪದ್ಯಾತ್ಮಕ ಮಂತ್ರಗಳ ಮೊದಲ ಸಂಕಲನವೇ ಯಜುರ್ವೇದವೆಂದು ತಿಳಿಯಬಹುದಾಗಿದೆ.ಯಜ್ಞದ ಮುಖ್ಯವಾದ ನಾಲ್ವರು ಪುರೋಹಿತರುಗಳಲ್ಲಿ ‘ಹೋತೃ’ವಿಗೆ ಋಗ್ವೇದ ಸಂಬಂಧಿಸುವಂತೆ ಯಜುರ್ವೇದವು ‘ಅಧ್ವರ್ಯು’ವಿಗೂ, ಸಾಮವೇದವು ‘ಉದ್ಗಾತೃ’ವಿಗೂ ಸಂಬಂಧಿಸಿರುತ್ತದೆ. ಕರ್ಮಾಚರಣೆಗೆ ಅಗ್ರ ಪ್ರಾಶಸ್ತ್ಯವನ್ನಿತ್ತ ಭಾರತೀಯರು ಯಜುರ್ವೇದವನ್ನು ಹೆಚ್ಚಾಗಿ ಅಧ್ಯಯನ ಮಾಡುವ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಸಹಜವೂ ಆಗಿದೆ.ಆದ್ದರಿಂದಲೇ ಈ ಯಜುರ್ವೇದವು ಅನೇಕ ಶಾಖೆಗಳನ್ನು ಹೊಂದುವಂತಾಗಿದೆ. ಇದರಲ್ಲಿ ಮೂಲದಲ್ಲಿ 101 ಶಾಖೆಗಳು ಇದ್ದವು ಎಂಬುದು ಪತಂಜಲಿಯ ‘ಮಹಾಭಾಷ್ಯ’ ದ ಪ್ರಸ್ಥಾವನೆಯಿಂದ ತಿಳಿದುಬರುತ್ತದೆ. ಆದರೆ ಈಗ ಉಪಲಬ್ಧಿಯಿರುವುದು ಕೇವಲ 6 ಮಾತ್ರ...! 
1. ಕಾಠಕಸಂಹಿತೆ
2. ಕಪಿಷ್ಠಲಕಠಸಂಹಿತೆ
3. ಮೈತ್ರಾಯಣೀಸಂಹಿತೆ
4. ತೈತ್ತರೀಯಸಂಹಿತೆ
5.ವಾಜಸವನೇಯೀ ಸಂಹಿತೆಯ ‘ಕಾಣ್ವ’ಶಾಖೆ .
6.ವಾಜಸನೇಯೀ ಸಂಹಿತೆಯ ಮಾದ್ಯಂದಿನ ಸಂಹಿತೆ.
ಇದರಲ್ಲಿ ಮೊದಲ ನಾಲ್ಕು ಸಂಹಿತಗಳಿಗೆ ‘ಕೃಷ್ಣಯಜುರ್ವೇದ’ವೆಂದೂ ಕೊನೇಯ ಎರಡು ಶಾಖೆಗಳಿಗೆ ‘ಶುಕ್ಲಯಜುರ್ವೇದ’ವೆಂದೂ ಕರೆಯುತ್ತಾರೆ. ಇಲ್ಲಿ ಈ ವಿಭಾಗಕ್ರಮಕ್ಕೆ ಕೊಟ್ಟ ಕಾರಣ ಇದರಲ್ಲಿ ಮೊದಲ ವಿಭಾಗವು ‘ಗದ್ಯಪದ್ಯಮಿಶ್ರಿತ’ವೂ, ಎರಡನೇಯದು ಕೇವಲ ಗದ್ಯಾತ್ಮಕವೂ ಇರುವುದಾಗಿದೆ. ಋಗ್ವೇದಕ್ಕೆ ‘ಸಾಯಣಭಾಷ್ಯ’ ವಿರುವಂತೆ ಕೃಷ್ಣಯಜುರ್ವೇದದ ತೈತ್ತರೀಯ ಸಂಹಿತೆಗೂ ಸಾಯಣರ ಭಾಷ್ಯವಿದೆ. ಇದರಲ್ಲಿ ಸಾಯಣಾಚಾರ್ಯರು ‘ಅನುಬಂಧಚತುಷ್ಟಯ’ವನ್ನು ಬಹುವಾಗಿ ವಿವರಿಸಿದ್ದಾರೆ.“ಇಷ್ಟಪ್ರಾಪ್ತ್ಯನಿಷ್ಟ ಪರಿಹಾರಯೋರಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ” ಎಂದರೆ ಯಾವ ಗ್ರಂಥವು ಇಷ್ಟಪ್ರಾಪ್ತಿ ಮತ್ತು ಅನಿಷ್ಟನಿವಾರಣಾ ರೂಪದ ‘ಅಲೌಕಿಕ’ ಉಪಾಯಗಳನ್ನು ಬೋಧಿಸುವುದೋ ಅದೇ ವೇದ ಎಂದು ವೇದ ಲಕ್ಷಣವನ್ನು ಹೇಳಿದ್ದಾರೆ...! ‘ಪ್ರತ್ಯಕ್ಷ ಅನುಮಾನಗಳಿಗೆ ಗೋಚರವಲ್ಲದ ಉಪಾಯವನ್ನು ಬೋಧಿಸುವುದೇ ‘ಶ್ರುತಿ’ ಯೆಂದು ಸ್ಪಷ್ಟಪಡಿಸುವುದಕ್ಕಾಗಿ ‘ಅಲೌಕಿಕ’ ಎನ್ನಲಾಗಿದೆ. “ಪ್ರತ್ಯಕ್ಷೇಣಾನುಮಿತ್ಯಾವಾ ಯಸ್ತೂಪಾಯೋ ನ ಬುಧ್ಯತೇ
ಏನಂ ವಿಂದತಿ ವೇದೇನ ತಸ್ಮಾತ್ ವೇದಸ್ಯ ದೇವತಾ||"
ಈ ವೇದಾಧಿಕಾರವು ‘ಉಪನಯನ’ ಸಂಸ್ಕಾರವಾದವರಿಗೆ ಮಾತ್ರ ಎಂಬ ಪರಂಪರೆಯ ಕಾರಣ ಸ್ತ್ರೀ ಶೂದ್ರಾದಿಗಳಿಗೆ ಉಪದೇಶಿಸುವ ಪರಿಪಾಠವಿರಲಿಲ್ಲ.  ವೇದವು ನಿತ್ಯವಾದುದರಿಂದ ಅದು ‘ಸ್ವಯಂಪ್ರಮಾಣ’. “ಸ್ವಾಧ್ಯಾಯೋಧ್ಯೇತವ್ಯಃ” ಎಂಬ ವಿಧಿವಾಕ್ಯಕ್ಕೆ ಅರ್ಥಜ್ಞಾನ ಪುರಸ್ಸರವಾಗಿ ವೇದಾಧ್ಯಯನ ಮಾಡಬೇಕು ಎಂಬುದೇ ಆಗಿದೆ.










ಭಾನುವಾರ, ಸೆಪ್ಟೆಂಬರ್ 6, 2015

ನನ್ನ ಇತಿಹಾಸದಲ್ಲೊಂದು ಇಣುಕು ನೋಟ.( ಹವ್ಯಕರು ಮತ್ತು ಮಠ)



         ಭಾರತೀಯ ಇತಿಹಾಸವನ್ನು ಇದಮಿತ್ಥಂ ಎಂದು ಇದುವರೆಗೆ ಯಾರೂ ಕಂಡು ಕೇಳಿದ್ದಿಲ್ಲ. ಇಲ್ಲಿನ ಇತಿಹಾಸಗಳೆಲ್ಲವೂ ಕೆಲವು ಶಾಸನಾಧಾರಿತವೂ ಕೆಲವು ಉಲ್ಲೇಖಗಳ ಆಧಾರಿತವೂ ಆಗಿದ್ದರೂ ಅನೇಕ ಐತಿಹಾಸಿಕ ಘಟನೆಗಳು ಕಪೋಲಕಲ್ಪಿತವಾದವುಗಳೇ ಆಗಿವೆ. ಇಂತಹ ಕಪೋಲ ಕಲ್ಪಿತ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದಾಗ ನನಗೆ ನಮ್ಮ ಈ ಹವ್ಯಕ ಪರಂಪರೆ ಮತ್ತು ಇತಿಹಾಸವನ್ನು ಕೆದಕುವ ಮನಸ್ಸಾಯಿತು. ಇದನ್ನೇ ಎಳೆಯಾಗಿರಿಸಿಕೊಂಡು ನನ್ನ ಅನೇಕ ಹಿರಿಯರು ಹಾಗೂ ಗೆಳೆಯರೊಂದಿಗೆ ಚರ್ಚಿಸಿದಾಗ ಬಂದ ಕೆಲವು ಮಾಹಿತಿಗಳನ್ನು ಇಲ್ಲಿ ಕಲೆಹಾಕುವ ಪ್ರಯತ್ಮ ಮಾಡಿದ್ದೇನೆ. ಅದೇ "ನಾವು ಮತ್ತು ನಮ್ಮ ಇತಿಹಾಸ"
( ಇಲ್ಲಿ ಬರುವ ವಿವರಣೆಗಳೆಲ್ಲವೂ ಸತಾರ್ಕಿಕವೇ ಹೊರತೂ ಯಾವುದೇ ಆಧಾರಗಳನ್ನು ಹೊಂದಿರುವುದಿಲ್ಲ.)
        ನೇರವಾಗಿ ಇತಿಹಾಸದ ಆಳಕ್ಕಿಳಿಯೋಣ... ಕಂಚಿಯ ಪಲ್ಲವರ ಮೇಲೆ ಕುಪಿತನಾದ ಕದಂಬರ ವಂಶಜನಾದ ಮಯ್ಯೂರ ಶರ್ಮ ಮಯ್ಯೂರ ವರ್ಮನಾದ ನೆಂಬ ಇತಿಹಾಸವನ್ನು ತಾವೆಲ್ಲರೂ ತಿಳಿದಿರುತ್ತೀರಿ. ಅಂತೆಯೇ ಅವನು ಈಗಿನ ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು ಈ ನೆಲವನ್ನು ಆಳಿದನೆಂಬುದು ಎಲ್ಲರಿಗೂ ತಿಳಿದಿದೆ. ಈ ಮಯ್ಯೂರ ವರ್ಮ ಮೂಲತಃ ಗೋದಾವರೀ ತೀರದ ಅಹಿಚ್ಛತ್ರದವನು ಮೇಲಾಗಿ ಬ್ರಾಹ್ಮಣ ( ಪೂರ್ವ ನಾಮ ’ಮಯ್ಯೂರ ಶರ್ಮ...!) ಇವನು ಕರ್ನಾಟಕದ ಬನವಾಸಿಯಲ್ಲಿ ತನ್ನ ಸಂಸ್ಥಾನವನ್ನು ಕಟ್ಟಿಕೊಂಡಮೇಲೆ ಇಲ್ಲಿ ಯಜ್ಞ ಕಾರ್ಯಗಳನ್ನು ನಡೆಸುವ ಸಲುವಾಗಿ ತನ್ನ ಮೂಲಸ್ಥಾನವಾದ ಅಹಿಚ್ಛತ್ರದಿಂದಲೇ ಅನೇಕ ಬ್ರಾಹ್ಮಣರುಗಳನ್ನು ಕರೆಸಿದ್ದ. ಬಂದ ಬ್ರಾಹ್ಮಣರು ತಮ್ಮ ಯಜ್ಞ  ಕಾರ್ಯಾನಂತರ ಪುನಃ ಅಹಿಚ್ಛತ್ರಕ್ಕೇ ಹೊರಟು ಹೋಗಿದ್ದರು. ಆದರೆ ಅವನ ಮಗನಾದ ರವಿವರ್ಮ ಮತ್ತು ಮೊಮ್ಮಗನಾದ ಕಾಕುಸ್ಥವರ್ಮನು ತಮ್ಮ ಕಾಲದಲ್ಲಿ (ಅಂದರೆ ಸುಮಾರು ಕ್ರಿ.ಶ. 450-480) ಒಂದು ಮಹಾ ಯಜ್ಞವನ್ನು ನಡೆಸುವ ಸಲುವಾಗಿ ಮತ್ತು  ತಮ್ಮ ರಾಜ್ಯದಲ್ಲಿ ಅಗ್ನಿಹೋತ್ರಾದಿಗಳು ನಡೆದುಕೊಂಡು ಬರಬೇಕು ಎಂಬ ಕಾರಣಕ್ಕಾಗಿ ಪುನಃ ಅಹಿಚ್ಛತ್ರದಿಂದ 7 ಗೋತ್ರದ ಸುಮಾರು 32 ಬ್ರಾಹ್ಮಣರನ್ನು ಬನವಾಸಿಗೆ ಕರೆಸಿದ. ಅವರಲ್ಲಿ ಕೆಲವು ಗೋತ್ರದವರು ಕಡಿಮೆ ಸಂಖ್ಯೆಯಲ್ಲಿದ್ದರು. ಇನ್ನು ಕೆಲವು ಗೋತ್ರದವರು ಬಹುಸಂಖ್ಯೆಯಲ್ಲಿದ್ದರು.  ಬನವಾಸಿಯಲ್ಲಿ ಮಹಾಯಾಗವನ್ನು ನಡೆಸಿದ ನಂತರ ಆ ಬ್ರಾಹ್ಮಣರನ್ನು ತನ್ನದೇ ಸಾಮ್ರಾಜ್ಯದ ಒಂದು ಪ್ರದೇಶವಾದ ಈಗಿನ ’ಹೈಗುಂದ’ ಪ್ರಾಂತಕ್ಕೆ ಕರೆದೊಯ್ದು ಅಲ್ಲಿ ಅವರ ಯಜ್ಞ ಕಾರ್ಯಗಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ ಇರಿಸಿದ. ( ಯಜ್ಞಕಾರ್ಯಗಳಿಗೆ ಮೂರು ಕಡೆ ನೀರನ್ನು ಒಂದು ಕಡೆ ಭೂಮಿಯನ್ನೂ ಹೊಂದಿರುವ ಪ್ರದೇಶವು ಅತ್ಯಂತ ಪ್ರಶಸ್ಥ ಎಂಬುದು ವೈದಿಕ ಮತ)
             ಹೀಗೆ ಹವ್ಯ-ಕವ್ಯಗಳನ್ನು ನಡೆಸುವ ಬ್ರಾಹ್ಮಣರು ಈ ಪ್ರದೇಶಕ್ಕೆ ಬಂದುದರಿಂದ ಇದನ್ನು "ಹೈಗುಂದ" ಎಂದು ಕರೆಯಲಾಯಿತು. ಅವರು ಹೈಗುಂದದಲ್ಲಿ ಯಜ್ಞಾದಿ ಕಾರ್ಯಗಳನ್ನು ನಡೆಸಿದರೂ ವಾಸಸ್ಥಳವು ಅದಕ್ಕೆ ಸಮೀಪವಿರುವ ಈಗಿನ ಅಗ್ರಹಾರ ( ಹೊನ್ನಾವರ- ಕುಮಟಾ ಮುಖ್ಯ ರಸ್ತೆಯಲ್ಲಿರುವ ) ವಾಗಿತ್ತು.
ಈಗ ಅಲ್ಲಿಗೆ ಬಂದ ಬ್ರಾಹ್ಮಣರಲ್ಲಿ ಈ ಯಜ್ಞ ಕಾರ್ಯವನ್ನು ನೋಡಿಕೊಳ್ಳುವ ಸಲುವಾಗಿ ಕೆಲವೊಂದು ಉಪಾಧಿಗಳನ್ನು ಅವರಲ್ಲಿಯೇ ಮಾಡಿಕೊಂಡರು ಅದು ಹೇಗೆಂದರೆ,
ಸಭಾಹಿತ - ಇವರು ಕಾಶ್ಯಪ ಗೋತ್ರದವರು
ಇವರದ್ದು ಒಂದೇ ಕುಟುಂಬ ಇದ್ದು ಒಮ್ದು ರೀತಿಯಲ್ಲಿ ಇದು ಧರ್ಮ ಪೀಠದ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.
ಹೆಗಡೆ - ಇವರು ವಾಸಿಷ್ಠ ಗೋತ್ರದವರು.
ಇವರು ಯಜ್ಞಕ್ಕೆ ಬೇಕಾದ ಯಾಜಮಾನ್ಯವನ್ನು ಹೊಂದಿದ್ದರು.
ಹೆಬ್ಬಾರ - ಇವರು ಗೌತಮ ಗೋತ್ರದವರು.
ಇವರದ್ದು ಯಜ್ಞದಲ್ಲಿ ವೇದಿಕೆಯ ನಿರ್ಮಾಣ ಹೊಣೆಯಾಗಿತ್ತು.
ಶಾನುಭೋಗ - ಇವರು ವಿಶ್ವಾಮಿತ್ರ ಗೋತ್ರದವರು
ಇವರದ್ದು ಲೆಕ್ಕಪತ್ರಗಳನ್ನು ಅರಸನಿಗೆ ಕೊಡುವ ಜವಾಬ್ದಾರಿಯಾಗಿತ್ತು.
ದೀಕ್ಷಿತ - ಇವರು ಜಮದಗ್ನಿ ಗೋತ್ರದವರು
ಇವರದ್ದು ಯಜ್ಞವನ್ನು ನಡೆಸಿಕೊಡುವುದಾಗಿತ್ತು.
ಮಧ್ಯಸ್ಥ - ಇವರು ಆಂಗೀರಸ ಗೋತ್ರದವರು.
ಇವರು ಈ ಬ್ರಾಹ್ಮಣರಲ್ಲಿ ಒಡಮೂಡುವ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸುವುದಾಗಿತ್ತು.
ಯಾಜಿಗಳು - ಇವರು ಭಾರದ್ವಾಜ ಗೋತ್ರದವರಾಗಿದ್ದರು.
 ಇವರದ್ದು ಯಜ್ಞ ಕಾರ್ಯವನ್ನು ನೆರವೇರಿಸುವುದಾಗಿತ್ತು
ಹೀಗೆ ಯಜ್ಞ ಸಂಬಂಧಿಯಾದ ಎಲ್ಲ ಉಪಾಧಿಗಳನ್ನೂ ಹಂಚಿಕೊಂಡು ಸಭಾಹಿತರ ಧರ್ಮ ಮಾರ್ಗದರ್ಶನದಲ್ಲಿ  ಜೀವನವನ್ನು ಸಾಗಿಸಿಕೊಂಡು ಬರುತ್ತಿದ್ದರು 
{ Dr. N.R.Nayak ರವರ ’ಉತ್ತರಕನ್ನಡದ ಜಾನಪದ’ ಎಂಬ ಉದ್ಗ್ರಂಥದಲ್ಲಿ ಉಲ್ಲೇಖಿಸಿರುವಂತೆ ಕಾಕುಸ್ಥವರ್ಮನ ಕಾಲದಲ್ಲಿ ಅಹಿಚ್ಛತ್ರದಿಂದ ಬಂದ 32 ಬ್ರಾಹ್ಮಣರು ಇಲ್ಲಿಗೆ ಬಂದ ನಂತರದಲ್ಲಿ ಅಗ್ರಹಾರ ಮತ್ತು ಸುತ್ತಲಿನ ಆಕಾಲದಲ್ಲಿ ವಾಸವಿದ್ದ ’ಹಾಲಕ್ಕಿ’ ಜನಾಂಗದ ಹೆಮ್ಮಕ್ಕಳನ್ನು ವಿವಾಹವಾಗಿ ತಮ್ಮ ಸಂತಾನವನ್ನು ಬೆಳೆಸಿದರು ಎಂದಿದ್ದರೆ. Dr. G.L.Hegde/ Dr.L.R.Hegde ಯವರ ಪ್ರಕಾರ ಬಂದ 32 ಜನ ಕೇವಲ ಬ್ರಾಹ್ಮಣರಲ್ಲ ಅವರು ಸಪತ್ನೀಕರಾಗಿಯೇ ಇಲ್ಲಿಗೆ ಬಂದಿದ್ದರು. ಏಕೆಂದರೆ ಆಕಾಲದಲ್ಲಿ ಯಜ್ಞಕ್ಕೆ ಸಪತ್ನೀಕರಾಗಿಯೇ ಹೋಗಬೇಕಿತ್ತು. ಎಂಬ ಎರಡು ವಾದಗಳಿವೆ.}
      

************************************************************************
       ಹೀಗೇ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹವ್ಯಕರು ತಮ್ಮ ಬ್ರಾಹ್ಮಣ್ಯವನ್ನು ಮೆರೆಯುತ್ತಿರುವ ಸಂದರ್ಭದಲ್ಲಿ ಆ ಇಡೀ ಬ್ರಾಹ್ಮಣ ಸಮುದಾಯದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಸಭಾಹಿತರು ಕಾಣಿಸಿಕೊಂಡರು ಮತ್ತು ಎಲ್ಲ ಬ್ರಾಹ್ಮಣರೂ ಸಭಾಹಿತರನ್ನು ಗುರು ಪೀಠವೆಂದು ನಡೆದುಕೊಳ್ಳುತ್ತಿದ್ದರು. ನಂತರದಲ್ಲಿ...
ಬ್ರಾಹ್ಮಣರ ಸಂತತಿ ಬೆಳೆಯುತ್ತಿದ್ದ ಹಾಗೇ ಈಗಿನ ಗೋಕರ್ಣ ಮತ್ತು ಗೋಕರ್ಣಕ್ಕೆ ತತ್ಸಂಬದ್ಧವಾದ ಧಾರೇಶ್ವರ ಗುಣವಂತೆ ಇಡಗುಂಜಿ ಮುಂತಾದ ಭಾಗಗಳಿಗೆ ತಮ್ಮ ವಿಸ್ತಾರವನ್ನು ಹೊಂದಿದರು.ಆ ವೇಳೆಗೆ ದಕ್ಷಿಣದಲ್ಲಿ ಕೋಟ, ಕೋಟೇಶ್ವರ, ಶಿವಳ್ಳಿ ಮೊದಲಾದ ಬ್ರಾಹ್ಮಣ ಕುಟುಂಬಗಳು ಬಂದಾಗಿತ್ತು.. ನಂತರದಲ್ಲಿ ಗುಣವಂತೆ ಪ್ರಾಂತದಲ್ಲಿ ವಾಸಿಸುತ್ತಿದ್ದ ಕೆಲ ಕುಟುಂಬಗಳು ಈಗಿನ  ದಕ್ಷಿಣ ಕನ್ನಡದ ’ವಿಟ್ಳ’ ಪ್ರಾಂತಕ್ಕೆ ವಲಸೆ ಹೋದರು ಅದಲ್ಲದೇ ಕೇರಳ ಪ್ರಾಂತಕ್ಕೂ ಕೂಡಾ ಈ ಹವ್ಯಕರು ವಲಸೆ ಹೋದರೆಂಬುದು ತಿಳಿದುಬರುತ್ತದೆ. ಹಾಗೆ ಹೋದ ಒಂದು ಕುಟುಂಬ ಕೇರಳದ ’ಕಾಲಟಿ’ ಎಂಬಲ್ಲಿ ನೆಲೆ ನಿಂತಿತ್ತು. ಅಲ್ಲಿನ ಒಬ್ಬ ಹವ್ಯಕ ಮಾಣಿಗೆ ಬಾಲ್ಯ ವಿವಾಹ ಏರ್ಪಟ್ಟು ಆ ಹೆಣ್ಮಗಳಿಗೆ ಒಂದು ಪುತ್ರ ಸಂತಾನವಾಗುತ್ತಿದ್ದಂತೆ ಗಂಡನು ತೀರಿಕೊಳ್ಳಲಾಗಿ ( ಶ್ರೀ ಶಂಕರರ ಚರಿತ್ರೆಯಲ್ಲಿ ಎಲ್ಲಿಯೂ ಅವರ ತಂದೆಯ ಕುರಿತಾದ ಯಾವ ಮಾಹಿತಿಯೂ ಲಭ್ಯವಾಗುವುದಿಲ್ಲ.) ಅವಳು ಬಾಲವಿಧವೆಯಾದಳು ಮತ್ತು ಅವಳ ಮಗನು ಬಾಲ್ಯದಲ್ಲಿಯೇ ಸಂನ್ಯಾಸವನ್ನು ಸ್ವೀಕರಿಸಿ ಸಕಲ ವೇದಗಳನ್ನೂ ಅಧ್ಯಯನ ಮಾಡಿದವನಾಗಿ ವಿಖ್ಯಾತನಾದ ಶ್ರೀ ಶಂಕರನೆನಿಸಿಕೊಂಡನು ಎಂಬುದು ತಥಾ ಕಥಿತ ಇತಿಹಾಸ ಅದರಂತೆ ವೇದ ವೇದಾಂಗಗಳನ್ನು ವೈದಿಕ ಧರ್ಮವನ್ನು ಈ ದೇಶದಲ್ಲಿ ನೆಲೆಗೊಳಿಸಲು ಇಡೀ ದೇಶವನ್ನು ಪರ್ಯಟನೆ ಮಾಡಿ ವೈದಿಕ ಮತವನ್ನು ಪ್ರಸಾರ ಮಾಡಿದ. ಶ್ರೀ ಶಂಕರರು ತಮ್ಮ ಮೂಲಸ್ಥಾನವಾದ ಈ ಹವ್ಯಕ ಪ್ರದೇಶಕ್ಕೆ ಬಂದು ಅಲ್ಲಿನ  ಅದುವರೆಗೆ ಧರ್ಮ ಪೀಠದಂತೆ ವರ್ತಿಸುತ್ತಿದ್ದ ಸಭಾಹಿತರನ್ನು ಗುರು ಪೀಠದ ಮುಖಾಂತರ ಧರ್ಮ ಕಾರ್ಯಗಳನ್ನು ನಡೆಸಿಕೊಂಡು ಬರುವಂತೆ ಕೇಳಿಕೊಂಡಾಗ ತಮ್ಮ ಸುಪರ್ದಿಯಲ್ಲಿದ್ದ ಧರ್ಮ ಪೀಠದ ಮಾನ್ಯತೆಯನ್ನು ಶ್ರೀ ಶಂಕರರ ಆಣತಿಯಂತೆ ಗೋಕರ್ಣದಲ್ಲಿ ಸಂಸ್ಥಾಪಿತವಾದ ಶ್ರೀ ಶಂಕರರ ಪ್ರ-ಪ್ರಥಮ ಅದ್ವೈತ ಪೀಠವೆಂದು ಘೋಷಿತವಾದ " ಸರ್ವತಂತ್ರ ಸ್ವತಂತ್ರ" ಇತ್ಯಾದಿ ಬಿರುದಾಂಕಿತವಾದ ಹವ್ಯಕ "ಮಂಡಲಾಧೀಶ್ವರ" ಪೀಠಕ್ಕೆ ಸರ್ವ ಸಮರ್ಪಣೆಯನ್ನು ಮಾಡಲಾಯಿತು.ಶ್ರೀ ಶಂಕರರ ಪ್ರಥಮ ಶಿಶ್ಯರಾದ ಶ್ರೀ ಸುರೇಶ್ವರಾಚಾರ್ಯರ ಶಿಷ್ಯರಿಗೆ ಈ ಧರ್ಮ ಪೀಠದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಆಕಾರಣಕ್ಕಾಗಿಯೇ ಇಂದಿಗೂ ಅನೂಚಾನವಾಗಿ ನಡೆಸಿಕೊಂಡು ಬಂದ ಪದ್ಧತಿಯನುಸಾರ ಈ ಸಭಾಹಿತ ಕುಟುಂಬಕ್ಕೆ ದೀಪಗಾಣಿಕೆ- ಪಾದಗಾಣಿಕೆ ಮೊದಲಾದ ಕಾಣಿಕೆಗಳಿಂದ ಮನಾಯಿ ಇರುತ್ತದೆ. ಅಲ್ಲದೇ ಸಭಾಹಿತ ಕುಟುಂಬವನ್ನು ’ಸರ್ವ ಮಾನ್” ಕುಟುಂಬ ಎಂದು ಸಾರಲಾಗಿದೆ. ಅಲ್ಲದೇ ಈ ಕುಟುಂಬದ ಸದಸ್ಯರು ಶ್ರೀ ಮಠಕ್ಕೆ ಆಗಮಿಸಿದಾಗ ಶ್ರೀ ಗುರುಗಳು ಸ್ವತಃ ಪೀಠದಿಂದ ಇಳಿದು ಬಂದು ಸಭಾಹಿತರನ್ನು ಕರೆದೊಯ್ದು ತಮ್ಮ ಬಲಭಾಗದಲ್ಲಿ ಆಸನವನ್ನು ಹಾಕಿ ಕೂರಿಸುವ ಕ್ರಮ ಇದೆ. ಅಲ್ಲದೇ ಸಭಾಹಿತರ ಕುಟುಂಬದಲ್ಲಿ ವರ್ಷದಲ್ಲಿ ಒಂದು ಗುರು ಪಾದುಕಾ ಪೂಜೆ ಹಾಗು ಗುರು ಭಿಕ್ಷವನ್ನು ಮಠದ ವತಿಯಿಂದಲೇ ನಡೆಸಿಕೋಂಡು ಬರಬೇಕೆಂಬ ವಿಧಿಯೂ ಇರುತ್ತದೆ.. 
    ಹೀಗೇ ಅನೇಕ ವರ್ಷಗಳ ವರೆಗೆ ಗೋಕರ್ಣವನ್ನು ಮೂಲಸ್ಥಾನವನ್ನಾಗಿಸಿಕೊಂಡು ನಡೆದುಕೊಂಡು ಬಂದ ಧರ್ಮ ಪೀಠವು ಗೋವಾದ ಗೋಮಾಂತಕರ ದಾಳಿಯನ್ನೆದುರಿಸಲಾಗದ ಅಂದಿನ ಇಲ್ಲಿನ ರಾಜ ಪ್ರಭುತ್ವವು ಗೋಕರ್ಣದಲ್ಲಿದ್ದ ಶ್ರೀ ಗುರು ಮಠವನ್ನು ಈಗಿನ ಕಡತೋಕೆಯ ಮಧ್ಯಭಾಗದಲ್ಲಿರುವ ಆ ಕಾಲದ ಹೆಬ್ಬಾರರುಗಳು ವಾಸವಾಗಿದ್ದ "ಹಳೆ ಮಠ" ಎಂಬಲ್ಲಿಗೆ ತಂದು ಅದನ್ನು " ಶ್ರೀ ರಘೂತ್ತಮ ಮಠ" ಎಂದು ಪುನಃ ಮರುನಾಮಕರಣ ಮಾಡಿ ಶ್ರೀಗಳನ್ನು ಇರಿಸಲಾಯಿತು. ಆದರೆ ಅಲ್ಲಿ ವಾಸವಾಗಿದ್ದ ಯತಿಗಳೊಬ್ಬರು ಅಲ್ಲಿನ ಕೆರೆಯಲ್ಲಿ ಸ್ನಾನಕ್ಕೆಂದು ಹೋದಾಗ ಅಲ್ಲಿ ಆಗಿನ ಹೆಬ್ಬಾರನ ಹೆಂಡತಿ ರಜಸ್ವಲೆಯಾಗಿದ್ದು ಅವಳು ಸ್ನಾನಕ್ಕೆ ಅದೇ ಕೆರೆಗೆ ಬಂದುದನ್ನು ಕಂಡು ಕುಪಿತರಾದ ಶ್ರೀಗಳು ವಂಶ ನಿರ್ವಂಶವಾಗಲೆಂದು ಶಪಿಸಿದರು. ಅಲ್ಲಿಂದೀಚೆಗೆ ಅಲ್ಲಿರುವ ಹೆಬ್ಬಾರ ಕುಟುಂಬವು ನಿರ್ನಾಮಗೊಂಡಿತು. ಈಗಲೂ ಅಲ್ಲಿ ಆ ಹೆಬ್ಬಾರರುಗಳು ವಾಸವಾಗಿದ್ದ ಬಗ್ಗೆ ದಾಖಲೆಗಳು ಹಾಗೂ ಹೆಬ್ಬಾರ ದೇವಸ್ಥಾನವೆಂದೇ ಕರೆಯಲ್ಪಡುವ ಒಂದು ದೇವಾಲಯವೂ ಇದೆ. ಹೀಗೆ ಶಾಪವನ್ನಿತ್ತ ಶ್ರೀಗಳು ಮುಂದೆ ಅದೇ ಕೆರೆಯನ್ನು ಉಪಯೋಗಿಸುವುದು ತರವಲ್ಲವೆಂದು ಹತ್ತಿರದಲ್ಲೇ ಇರುವ ಈಗಿನ ಮಠದ ಸಮೀಪಕ್ಕೆ ಹೋಗಿ ಅಲ್ಲಿ ಕುಟೀರವನ್ನು ಕಟ್ಟಿಕೊಂಡು ವಾಸಮಾಡತೊಡಗಿದರು ಎಂಬುದು ತಿಳಿದುಬರುತ್ತದೆ. ಆ ಕಾಲದ ಅಲ್ಲಿನ ಮಾಡಳಿಕನಾದ ಚಂದ್ರಸೇನನಿಗೂ ಶ್ರೀ ಮಠಕ್ಕೂ ಆಗಿನ ಸ್ವಾಮಿಗಳ ಶೀಘ್ರಕೋಪದ ಕಾರಣದಿಂದಾಗಿ ಅಷ್ಟು ಒಟ್ಟಂದದ ವ್ಯವಹಾರವಿರಲಿಲ್ಲ..!
            ಇಲ್ಲಿಗೆ ಸುಮಾರು 28 ಯತಿ ಪರಂಪರೆಯು ಕಾಲವಾದುದಾಯಿತು. ಈಗ ಇತಿಹಾಸದ ದಿಕ್ಕು ಬದಲಾಗುತ್ತದೆ. ಇದು ತಾರ್ಕಿಕವಾದುದರಿಂದ ಯಾರೂ ಬೇಸರಗೊಳ್ಳುವ ಅಗತ್ಯವಿಲ್ಲ. ಸತ್ಯದೆಡೆಗೆ ಸಾಗುವುದಕ್ಕೊಂದು ದಾರಿ ಅಷ್ಟೇ.
           ಈಗ ನಾವು ಶ್ರೀ ಪೀಠ ಸ್ವರ್ನವಳ್ಳಿಯ  ಇತಿಹಾಸದ ಕಡೆಗೆ ಸ್ವಲ್ಪ ನೋಡೋಣ.
    "ಸ್ವರ್ನವಳ್ಳಿ" ಇದು ಈಗಿರುವ ಸ್ಥಳದಲ್ಲಿಯೇ ಪ್ರಾರಂಭವಾದ ಧರ್ಮ ಪೀಠವಲ್ಲ. ಶ್ರೀ ರಘೂತ್ತಮ ಮಠದ ಇತಿಹಾಸ ಮತ್ತು ಯತಿ ಪರಂಪರೆಯನ್ನು ಮತ್ತು ಶ್ರೀ ಸಂಸ್ಥಾನ ಸ್ವರ್ನವಳ್ಳಿಯ ಪೀಠ ಮತ್ತು ಯತಿ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ನಮಗೆ ಹಿಂದಿನ 6 ತಲೆಮಾರಿನವರೆಗಿನ ಯತಿಗಳ ಬಗ್ಗೆ ಯಾವುದೇ ಮಾಹಿತಿ ಸರಿಯಾಗಿ ಲಭ್ಯವಾಗುವುದಿಲ್ಲ.
ನಾನು ಮೇಲೆ ತಿಳಿಸಿದಂತೆ ಹಳೇಮಠದಿಂದ ನಿರ್ಗಮಿಸುವಾಗ ಆ ಕಾಲದಲ್ಲಿದ್ದ ಶ್ರೀ ನರಸಿಂಹ ಭಾರತೀ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿಯಾಗಿತ್ತು. ಆದರೆ ಅವರೊಳಗಿನ ಭಿನ್ನಾಭಿಪ್ರಾಯದಿಂದಾಗಿ ಕಿರಿಯ ಶ್ರೀಗಳು ಮಠವನ್ನು ತೊರೆದು ಸಮೀಪದಲ್ಲೇ ಇರುವ " ಮೇಲಿನ ಮಠ" ಎಂಬಲ್ಲಿಗೆ ತಮ್ಮ ವಾಸಸ್ಥಳವನ್ನು ಬದಲಾಯಿಸಿಕೊಂಡರಲ್ಲದೇ ಮೊದಲಿನ ಮಠಕ್ಕೂ ತಮಗೂ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಆಕಾಲದ ಚಂದಾವರ ಪ್ರಾಂತದ ಮಾಂಡಳಿಕನಾದ ಚಂದ್ರಸೇನನಿಗೆ ಅರುಹಲಾಗಿ. ಅವನು ಈ ಗುರ್ ಪೀಠಕ್ಕೂ ಒಂದು ಸ್ಥಾನವನ್ನು ಕಲ್ಪಿಸಿ ತನ್ನ ಒಕ್ಕಲುತನವನ್ನು ಈ ಪೀಠಕ್ಕೇ ಸಮರ್ಪಿಸಿ ಮಠಕ್ಕೆ ಬೇಕಾದ ಆದಾಯಕ್ಕಾಗಿ ಸಮೀಪದ "ಅಂಸಳ್ಳಿ" ಹಾಗೂ "ಬಾದಳ್ಳಿ" ಎಂಬೆರಡು ಗ್ರಾಮಗಳನ್ನು ಉಂಬಳಿಯಾಗಿ ನೀಡಿ ಮೇಲಿನ ಮಠವೆಂಬ ಪ್ರದೇಶದಲ್ಲಿ ಮಠವನ್ನೂ ನಿರ್ಮಿಸಿಕೊಟ್ತನು. ಅಲ್ಲಿ ಬಂದ ಯತಿಗಳು ಅಕಾಲ ಮೃತ್ಯುವಿಗೆ ತುತ್ತಾಗಲಾಗಿ ಮುಂದೆ ರಾಜನ ಇಚ್ಛೆಯಂತೆ ಶ್ರೀ ಕ್ಷೇತ್ರ ಮತ್ತು ಆಮ್ನಾಯ ಪೀಠವಾದ ಶೃಂಗೇರಿಯಿಂದ ಸನ್ಯಾಸ ದೀಕ್ಷೆ ಕೊಡಿಸಿ ಅಲ್ಲಿಗೆ ಓರ್ವ ಪೀಠಾಧಿಪತಿಯನ್ನು ನಿಯಮಿಸಿಕೊಳ್ಳಲಾಯಿತು. ಮತ್ತು ಮುಂದೆ ಅದು "ಸರಸ್ವತೀ ಪೀಠ"ವಾಗಿ ಬೆಳೆದು ಬಂತು...!
   ಕಾಲಕ್ರಮದಲ್ಲಿ ಅಗ್ರಹಾರ ಹಾಗೂ ಸುತ್ತ ಮುತ್ತಲು ವಾಸಿಸುತ್ತಿದ್ದ ಬ್ರಾಹ್ಮಣ ( ಹವ್ಯಕ) ಕುಟುಂಬಗಳು ಜೀವನ ನಿರ್ವಹಣೆಗಾಗಿ ಘಟ್ಟದ ಮೇಲಿನ ಪ್ರಾಂತಗಳಿಗೂ ಹೋಗತೊಡಗಿದರು. ಈ ಮೇಲಿನ ಮಠಕ್ಕೆ ನಡೆದುಕೊಳ್ಲುತ್ತಿದ್ದ ಅನೇಕ ಕುಟುಂಬಗಳು ಹೋಗಿ ಸಿರ್ಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ನೆಲೆಸಲಾಗಿ ಇಲ್ಲಿ ಅಂಸಳ್ಳಿ ಬಾದಳ್ಳಿ ಪ್ರದೇಶಗಳಿಂದ ಬರುವ ಆದಾಯವೂ ಕ್ಷೀಣಿಸುತ್ತಾ ಬದಿರುವುದರಿಂದ ಮೇಲಿನ ಮಠದಲ್ಲಿ ಇರುವ ಶ್ರೀಗಳು ಇಲ್ಲಿಂದ ಕಾಶೀ ಕ್ಷೇತ್ರಕ್ಕೆ ಹೋಗಿ ಅಲ್ಲೇ ತಂಗಿದ್ದರು ಇಲ್ಲಿಗೆ ಸುಮಾರು 3 ಜನ ಯತಿಗಳು ಈ ಮೇಲಿನ ಮಠದಲ್ಲಿ ವಾಸವಿದ್ದ ಬಗ್ಗೆ ಕುರುಹುಗಳು ಲಭ್ಯವಿವೆ. ಅಲ್ಲದೇ ಇನ್ನೊಂದು ವಿಶೇಷವೆಂದರೆ, ಈ ಮೇಲಿನ ಮಠದಲ್ಲಿ ಇರುವ ಶ್ರೀ ಸರ್ವಜ್ಞೇಂದ್ರ ಸರಸ್ವತಿ, ಶ್ರೀ ವಿಶ್ವ ವಂದ್ಯ ಸರಸ್ವತಿ ಮುಂತಾದ ಮೂರು ಯತಿ ಪರಂಪರೆಯನ್ನೊಳಗೊಂಡ ಮುಂದೆ ಸ್ವರ್ನವಲ್ಲೀ ಕ್ಷೇತ್ರದಲ್ಲಿ  ವಿಜೃಂಭಿಸಿದ ಯತಿಗಳನ್ನು ಹೊರತು ಪಡಿಸಿದರೆ ಈ ಎರಡೂ ಶ್ರೀ ಮಠಗಳ ಯತಿ ಪರಂಪರೆಯು ಒಂದೇ ಆಗಿರುವುದು ಸೋಜಿಗ.! ಹೀಗೆ ಮೇಲಿನ ಮಠದಲ್ಲಿ ಆದಾಯದ ಕೊರತೆಯುಂಟಾಗಿ ಶ್ರೀಗಳು ಕಾಶೀ ಕ್ಷೇತ್ರದ ಕಡೆಗೆ ಹೋದರು. ಮತ್ತು ನಂತರದಲ್ಲಿ ಈ ಘಟ್ಟದ ಮೇಲಿನ ಹವ್ಯಕರು ತಮ್ಮ ಊರಿಗೆ ಕರೆತಂದು ಈಗಿನ ಸ್ವರ್ನವಳ್ಳಿಯಲ್ಲಿ ಮಠವನ್ನು ನಿರ್ಮಿಸಿ ಅಲ್ಲಿ ಶ್ರೀಗಳ ಆವಾಸಕ್ಕೆ ವ್ಯವಸ್ಥೆಯನ್ನು ಮಾಡಿದರು ಅಲ್ಲದೇ ಅಲ್ಲಿಗೆ ನಡೆದುಕೊಳ್ಲಲು ಪ್ರಾರಂಭಿಸಿದರು. ಈ ಸ್ವರ್ನವಳ್ಳಿ ಮಠಕ್ಕೆ ಚಂದ್ರಸೇನನ ಕಾಲದಿಂದ ಇಲ್ಲಿ ಕಡತೋಕೆಯ ಮೇಲಿನ ಮಠಕ್ಕೆ ನಡೆದುಕೊಳ್ಳುತ್ತಿದ್ದ ರಾಮ ಕ್ಷತ್ರಿಯ ಸಮಾಜದವರೂ  ಅಲ್ಲಿ ಹೋಗಿ ತಮ್ಮ ಗುರುಕಾಣಿಕೆಯನ್ನು ಸಮರ್ಪಿಸಿ ಬರಲಾರಂಭಿಸಿದರು....
ಹವ್ಯಕರ ಇನ್ನೊಂದು ಧರ್ಮ ಪೀಠ- "ನೆಲೆಮಾವು ಮಠ"

     ಹೈಗುಂದ ಪ್ರಾಂತವು ಅದಾಗಲೇ ಶರಾವತೀ ನೀರಿನ ಪ್ರಭಾವದಿಂದಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿತ್ತು. ಆ ಕಾಲಕ್ಕೆ ಅಲ್ಲಿ ಧರ್ಮ ಸೂಕ್ಷ್ಮಗಳನ್ನು ತೀಲಿಸುವ ಸಲುವಾಗಿ ಒಂದು ಪೀಠ ಸ್ಥಾಪನೆಯಾಗಿತ್ತು. ಚತುರಾಮ್ನಾಯ ಪೀಠಸ್ಥರಾದ ಶ್ರೀ ಶೃಂಗೇರಿ ಸಂಸ್ಥಾನದ ವತಿಯಿಂದ  ಸಂನ್ಯಾಸ ದೀಕ್ಷೆಯನ್ನು ಪಡೆದ ಯತಿವರರೊಬ್ಬರು ಸಾಮ ವೇದಿಗಳು..! ಅಲ್ಲಿ ನೆಲೆ ನಿಂತಿದ್ದರು ಮತ್ತು ಆ ಭಾಗದ ಜನರಿಗೆ ಧರ್ಮ ಗುರುವೆನ್ನಿಸಿಕೊಂಡು ತಮ್ಮ ಧರ್ಮಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಅಲ್ಲಿಯೂ ಆದಾಯ ಕ್ಷೀಣವಾಗಿರುವುದರಿಂದ ಮತ್ತು ಆ ಭಾಗದಲ್ಲಿ ಆಗ ತಲೆದೋರಿದ ಮೈಲಿ ಬೇನೆ ರೋಗದ ಕಾರಣ ಶ್ರೀಗಳು ವಿಚಲಿತರಾಗಿ ಘಟ್ಟದ ಪ್ರಾಂತಕ್ಕೆ ತಮ್ಮ ಆವಾಸವನ್ನು ಬದಲಿಸಲು ಮುಂದಾದರು. ಆಗ ಅವರು ಈಗಿನ ಸಿದ್ದಾಪುರದ ಸಮೀಪದ " ನೆಲೆ ಮಾವು" ಎಂಬಲ್ಲಿಗೆ ತೆರಳಿ ಅಲ್ಲಿ ವಾಸಮಾಡತೊಡಗಿದರು. 
    ಹೀಗೆ ಹವ್ಯಕರದ್ದಾಗಿ ಮೂರು ಧರ್ಮ ಪೀಠಗಳು ನಮ್ಮ ಸಮಾಜದ ಧರ್ಮ ಜಾಗೃತಿಯನ್ನು ಮುನ್ನಡೆಸಿಕೊಂಡು ಬಂದವು.
ಇಷ್ಟಾದರೂ ಇದರ ಇತಿಹಾಸ ನಿರ್ಣಾಯಕವಲ್ಲ. ಇನ್ನೂ ನಮಗೆ ಬೇಕಾದಷ್ಟು ಕಪೋಲ ಕಲ್ಪಿತ ಕಥೆಗಳು ದೊರೆಯುತ್ತಿವೆ. ಅವುಗಳನ್ನು ತಾರ್ಕಿಕವಾಗಿ ಕಾಲಾನುಕ್ರಮಕ್ಕೆ ಹೊಮ್ದಿಸಿ ಪರಾಮರ್ಶಿಸಿ ಬರೆಯಬೇಕಿದೆ.














ಶನಿವಾರ, ಮಾರ್ಚ್ 14, 2015

ಬ್ರಹ್ಮಣಸ್ಪತಿಯ ಗಣಪತಿ ರೂಪ.

ವೇದಗಳ ಬ್ಸಹ್ಮಣಸ್ಪತಿಯಿಂದ ಪೈರಾಣಗಳ ಗಣಪತಿಯವರೆಗೆ
ವೇದಗಳ ಬ್ಸಹ್ಮಣಸ್ಪತಿಯಿಂದ ಪೈರಾಣಗಳ ಗಣಪತಿಯವರೆಗೆ

.....ಭಾರತದ ದೇವತಾಶಾಸ್ತ್ರದಲ್ಲಿ , ಇಂದಿಗೆ ಹಿಂದೂ ಧರ್ಮದಲ್ಲಿ ಪ್ರಚಲಿತವಿರುವ, ಸಂಸ್ಕೃತ ಸಾಹಿತ್ಯಗಳಲ್ಲಿ ಉಲ್ಲೇಖೀಸಲ್ಪಡುವ ದೇವತೆಗಳನ್ನು -1. ವೈದಿಕ ಅರ್ಥಾತ್‌ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವ ವೇದಗಳಲ್ಲಿ ನೇರವಾಗಿ ಹೇಳಲ್ಪಟ್ಟಿರುವ ದೇವತೆಗಳು. 2. ಪುರಾಣೋಕ್ತ (ವೈಷ್ಣವ, ಶೈವ-ಶಾಕ್ತ, ಮತ್ತು ಗಾಣಪತ್ಯ) ಮತ್ತು 3. ಪುರಾಣ -ಆಗಮೋಕ್ತ (ಪುರಾಣ ಮತ್ತು ಶೈವ-ಶಾಕ್ತ, ವೈಷ್ಣವ ಆಗಮಗಳೆರಡರಲ್ಲೂ ಹೇಳಲ್ಪಟ್ಟ) ಎಂಬ ಮೂರು ವರ್ಗಗಳಾಗಿ ಗುರುತಿಸಬಹುದು.
ಇಂದ್ರ, ಅಗ್ನಿ , ಮರುತ್ತುಗಳು, ಪ್ರಜಾಪತಿ, ರುದ್ರ-ಶಿವ, ವಿಷ್ಣು, ಶಚೀ, ವಾಗಂಭ°ಣೆ ಮಿತ್ರ, ಸೂರ್ಯ- ಇತ್ಯಾದಿ ದೇವತೆಗಳು ನೇರವಾಗಿ ನಿರ್ದಿಷ್ಟ ಸೂಕ್ತಗಳ ಮೂಲಕ ವೇದಸಾಹಿತ್ಯದಲ್ಲಿ ಹೇಳಲ್ಪಟ್ಟ ದೇವತೆಗಳು. ಋಗ್ವೇದದಲ್ಲಿ ಗಣಪತಿಯು ಹೇಳಲ್ಪಟ್ಟಿರುವನಾದರೂ, ಅದು ಬೃಹಸ್ಪತಿ-ಬ್ರಹ್ಮಣಸ್ಪತಿಗೆ (ಋ. 2.23.1) ಅಥವಾ ಇಂದ್ರನಿಗೆ (ಋ. 8.81) ಮತ್ತೂಂದೆಡೆ "ಗಣೇಶಾನ' ಎಂದು ಶಿವನಿಗೆ ವಿಶೇಷಣವಾಗಿ ಅನ್ವಯಿಸುವ ಪದ. ಅದು ನಾವಿಂದು ನಂಬಿರುವ ವಕ್ರತುಂಡ, ಗಜಾನನನಾದ ಶಿವ-ಪಾರ್ವತಿಯರ ಪುತ್ರ ಗಣಪತಿಯಲ್ಲ. ಗಣಾನಾಂತ್ವಾ ಗಣಪತಿಂ... ಎನ್ನುವ ಸೂಕ್ತ "ಕವಿ, ಜ್ಯೇಷ್ಠರಾಜ, ಬ್ರಹ್ಮಣಾಂ ಬ್ರಹ್ಮಣಸ್ಪತಿ'ಯೆಂದು ಬೃಹಸ್ಪತಿಗೆ ಸಂಬಂಧಿಸಿದ್ದು. ಅದೇ ರೀತಿ ಋ. 8.81ರ ಸೂಕ್ತ ಆತೂನ ಇಂದ್ರಕ್ಷುಮಂತಂ... ಅನ್ನುವ ಇಂದ್ರನ ಕುರಿತಾದದ್ದು. ಋಷಿಗಣದ ರಾಜ (ಋಕ್ವತ್ತುಗಳ) ಬ್ರಹ್ಮಣಸ್ಪತಿ.
ಮರುತ್ತುಗಳ ಗಣರಾಜ ಇಂದ್ರ. ಒಂದು ಗಣವು ಏಳು ಸಂಖ್ಯೆಯುಳ್ಳದ್ದೆನ್ನುವ ಅರ್ಥದಲ್ಲಿ ಋಗ್ವೇದದಲ್ಲಿ ಬಳಸಲಾಗಿದೆ. ಸಪ್ತ ಮರುತ್ತು (ಇದು ಪ್ರಾಚೀನ ಬ್ಯಾಬಿಲೋನ್‌, ಈಜಿಪ್ತ್ , ಗ್ರೀಕ್‌ ಪುರಾಣಗಳಲ್ಲೂ ಹೇಳಲ್ಪಟ್ಟಿದೆ)ಗಳ ಅಧಿಪತಿ ಇಂದ್ರ. ದೇವತೆಗಳ ರಾಜ ಬ್ರಹ್ಮಣಸ್ಪತಿ. ಅದೇ ರೀತಿ ರುದ್ರನೂ ಮರುತ್ತುಗಳ ಗಣದ ಪತಿಯಾದ, "ಈಶಾನ'-"ಗಣೇಶಾನ'. ಇದು ಬಿಟ್ಟರೆ ರುದ್ರಪುತ್ರನಾದ "ಗಜಾನನ' - ಗಣೇಶಾನ ವೇದಗಳಲ್ಲಿ ಕಾಣುವುದಿಲ್ಲ. ಪ್ರಾಚೀನ ಬ್ಯಾಬಿಲೋನಿನ ಹಮ್ಮುರಬಿ (ಕ್ರಿ. ಪೂ. 2600)ಯ ಕಾಲದ ಮರುತ್ತುಗಳ ದೇವತೆ "ಮರ್ಧುಕ್‌' (ಮುಂದಕ್ಕೆ ರೋಮನರ ದೌÂ-ಪಿತರ = "ಜ್ಯುಪಿಟರ್‌' ಏಳು ಪ್ರಚಂಡ ಮಾರುತರುಗಳ ಅಧಿಪತಿ)ನಿಗೆ ಸಮಾನವಾದ ಭಾರತದ ಜ್ಯುಪಿಟರ್‌ ಬ್ರಹ್ಮಣಸ್ಪತಿ = ಬೃಹಸ್ಪತಿ.
ಗಜಾನನನ ಕಲ್ಪನೆಯೇ ವೇದೋತ್ತರ ಕಾಲದ್ದು. ಆದರೆ, ಮುಂದಿನ ಗಜಾನನ ಗಣಪತಿಗೆ ಸಲ್ಲುವ ಅನೇಕ ಲಕ್ಷಣಗಳು ಋಗ್ವೇದದ ಗಣಪತಿಯಲ್ಲೂ ಕಾಣಬಹುದು-ಕವಿ, ವಿಪ್ರತಮ, ಜ್ಯೇಷ್ಠರಾಜ, ಪರಶುಧಾರಿ, ಸ್ವರ್ಣಕಾಂತಿ ಶರೀರದವ, ಬೃಹತ್‌ ಶರೀರಿ. ಇವಲ್ಲದೆ ಇತರ ವಿಶೇಷಣಗಳೆಂದರೆ - ದೇವಪುರೋಹಿತ, ಋಕ್ವತ್ತುಗಳ ಗಣದ ಮುಖ್ಯಸ್ಥ , ಇಂದ್ರಸಖ, ಇಂದ್ರನ ಒಟ್ಟಿಗಿರುವವ =ಇಂದ್ರಯುಜಾ = ಅವನೊಡನೆ ಸೋಮಪಾನ ಮಾಡುವವ (2. 23.18), ಇಂದ್ರನಂತೆ ವಜ್ರಿಣಃ (ಋ. 1.40. 8), ದೇವತೆಗಳಲ್ಲಿ ದೇವತಮ (2.24.3), ಸ್ತುತಿಸದವರನ್ನು ನಿಗ್ರಹಿಸುವವ (2. 25.1, 2.23.4) ಇತ್ಯಾದಿ. ಹೀಗಾಗಿ, ಈತ ಬ್ರಹ್ಮಣಸ್ಪತಿಯಾದ ಬೃಹಸ್ಪತಿಯೇ ಆಗಿದ್ದಾನೆಂಬ ಅರ್ಥ ಬರುತ್ತದೆ. ಅಂದಿನ ಯಜ್ಞಯಾಗಾದಿಗಳಲ್ಲಿ ಯಜ್ಞವೇದಿಯ ಬಳಿ ಪೀಠಸ್ಥನಾಗಿ, ಜಾತವೇದ ಅಗ್ನಿಯ ಸಮೀಪದಲ್ಲಿ ಪ್ರಥಮಪೂಜ್ಯನಾಗಿ, ಪೂರ್ವಭಾಜ್ಯನಾಗಿ ಪರಿಗಣಿಸಲ್ಪಡುವವನು. ಶೌನಕರು ಬ್ರಹದ್ದೇವತಾದಲ್ಲಿ "ಬೃಹತ್ತಾದ ಸ್ವರ್ಗಾಂತರಿಕ್ಷವನ್ನು ತನ್ನ ಶ್ರೇಷ್ಠವಾದ ಕರ್ಮದಿಂದ ರಕ್ಷಿಸುವವ' ಎಂದು ಅರ್ಥ ನೀಡುತ್ತಾರೆ. ಅಲ್ಲದೆ, ವಾಕ್ಕೇ ಬ್ರಹ್ಮ, ಸತ್ಯವೇ ಬ್ರಹ್ಮ , ಸಮಸ್ತ ಪ್ರಪಂಚವೂ ಬ್ರಹ್ಮವೇ ಆಗಿರುವುದು. ಬ್ರಹ್ಮ ಸ್ವರೂಪವಾದ ಇವೆಲ್ಲವನ್ನು ರಕ್ಷಿಸುವವನೇ "ಬ್ರಹ್ಮಣಸ್ಪತಿ' ಎಂದೂ ಹೇಳುತ್ತಾರೆ (ಬ್ರಹ್ಮವಾ ಬ್ರಹ್ಮ ಸತ್ಯಂ... ಪಾತಾರಂ ಬ್ರಹ್ಮರಾಸ್ತೇನ). ಹೀಗಾಗಿ, ಪ್ರಜಾಪತಿ ಬ್ರಹ್ಮನೇ ಈತನೆಂಬ ಅರ್ಥವನ್ನದು ಸೂಚಿಸುತ್ತದೆ. ಹೀಗಾಗಿಯೇ ಆತನನ್ನು ಮುಂದಿನ ಗಣೇಶ ಪುರಾಣ, ಮುದ್ಗಲ ಪುರಾಣ, ಅಥರ್ವಶೀರ್ಷ ಉಪನಿಷತ್ತುಗಳು ಪರಬ್ರಹ್ಮನಾಗಿ ವರ್ಣಿಸಲು ಆಧಾರವಾಗಿ ಬಳಸಿಕೊಂಡಿವೆ. ಇವುಗಳ ಪ್ರಕಾರ ಗಣೇಶನೊಬ್ಬ ದೇವತೆ ಮಾತ್ರವಲ್ಲ- ದೇವಾಧಿದೇವ-ಪರಬ್ರಹ್ಮನಾಗುತ್ತಾನೆ. ಪ್ರಾಕಾರ ದೇವತೆಯಲ್ಲ , ಪ್ರಧಾನ ದೇವತೆಯಾಗುತ್ತಾನೆ- ದೇವಾಲಯದಲ್ಲಿ.
ಶುಕ್ಲಾಂಬರಧರಂ ವಿಷ್ಣುಂ...
ಋಗ್ವೇದ ಮಂಡಲ 4. 50ರಲ್ಲಿ ಇಂದ್ರನ ಜತೆ ಬೃಹಸ್ಪತಿಯ ಸ್ತುತಿಯಿದೆ. ಆತ ಋಕ್ವತ್ತುಗಳ ಪತಿ (ಋಕ್ವತಾ ಗಣೇನ ವಲಂ). ಪೂರ್ವಭಾಜ (ವಂದತೇ ಪೂರ್ವಭಾಜಂ) ಇಂದ್ರನ ಜತೆ ಸೋಮಪಾನ ಮಾಡುವಾತ (ಇಂದ್ರಶ್ಚ ಸೋಮಂ ಪಿಬತಂ). ಋ. 8.96ರಲ್ಲಿ ಇಂದ್ರಾಬೃಹಸ್ಪತಿಯರ ಸ್ತುತಿ. ಇಂದ್ರ ವೃತ್ತನನ್ನು ಕೊಲ್ಲಲು ತ್ರಿಷಷ್ಟಿ (63) ಮರುತ್ತುಗಳ ಜತೆ ವಜ್ರಬಾಹುವಾಗಿ ಹೊರಡುವುದನ್ನು ಹೇಳುತ್ತದೆ. ಇಲ್ಲಿ ಮರುತ್ತುಗಳ ಒಡೆಯ ಇಂದ್ರನೇ ಬೃಹಸ್ಪತಿಯೂ ಆಗಿದ್ದಾನೆ. ಆತನೇ ವೃತ್ರನನ್ನು ವಧಿಸಿ ಶುಷ್ಕತೆಯನ್ನು ಹೋಗಲಾಡಿಸಿ, ಸ್ವರ್ಗಾಂತರಿಕ್ಷವನ್ನು ಪಾಲಿಸುವಾತ. ಮುಂದಕ್ಕೆ ಈ 63 ಮರುತ್ತುಗಳು ವೀರಶೈವ ದರ್ಶನದಲ್ಲಿ 63 "ವಿರಕ್ತ ಪುರಾತನ'ರಾಗುವುದನ್ನು ಜೈನರಲ್ಲಿ 63 ಶಲಾಕಾ ಪುರುಷರಾಗುವುದನ್ನು ಕಾಣುತ್ತೇವೆ. ವೈಷ್ಣವ ಪಾಂಚರಾತ್ರದಲ್ಲಿ ಶುಕ್ಲಾಂಬರಧರಂ ವಿಷ್ಣುಂ ಎನ್ನುವ ಮೂಲಕ ಸ್ತುತಿಸಲ್ಪಡುವ ಗಣಪತಿಯು ಆದಿತ್ಯರೂಪಿ. ಆದಿತ್ಯನೇ ಮೂಲನಾರಾಯಣ- ಗಣಪತಿ. ಆದಿತ್ಯನ ಸಪ್ತವರ್ಣಗಳು ಒಟ್ಟಾಗಿ, ಒಂದಾಗುವ ಶುಕ್ಲ (ಬಿಳಿ), ಅಂಬರ (ಆಕಾಶ) ಧರ, ವಿಷ್ಣು (ಸರ್ವವ್ಯಾಪಿ).
ನಿಷುಸೀದ ಗಣಪತೇ ಗಣೇಶುತ್ವಾ... ಚಿತ್ರಮರ್ಚ- ಎನ್ನುವ ಇಂದಿನ ಗಣಪತಿಯ ಪ್ರಧಾನ ವೇದಸೂಕ್ತ, ಇಂದ್ರನಿಗೇ ಅನ್ವಯಿಸುವುದು. ಋಗ್ವೇದದಲ್ಲಿ ಗುಂಪಾಗಿರುವುದು ಗಣವೆನಿಸುತ್ತದೆ. ಆದಿತ್ಯರು, ರುದ್ರರು, ವಸುಗಳು, ಮರುತ್ತುಗಳು, ವಿಶ್ವೇದೇವರುಗಳು, ಆಭಾಸ್ಪರರು, ಅನಿಲರು, ಸಂಧ್ಯಾದೇವತೆಗಳು, ಮಹಾರಾಜಕರು, ತುಷಿತರು - ಇತ್ಯಾದಿ. ಹಾಗಾಗಿ, ಋಗ್ವೇದದ ಗಣಪತಿಯು ಈ ಅರ್ಥದಲ್ಲಿ ಇಂದ್ರ, ಬ್ರಹ್ಮಣಸ್ಪತಿಯಲ್ಲದೆ, ಮುಂದಿನ ಪುರಾಣಗಳ ವಿನಾಯಕ, ವಿಘ್ನಕರ್ತ, ವಿಘ್ನಹರ್ತ, ವಕ್ರತುಂಡ, ಗಜಾನನನಲ್ಲ. ಶಿವಪುತ್ರನಲ್ಲ.
ಆದರೆ, ಮುಂದಕ್ಕೆ ಕ್ರಿ. ಶ. 5-6ನೇ ಶತಮಾನಕ್ಕೆ, ಭಾರತೀಯ ಮತ್ತು ಯವನರ ಜ್ಯೋತಿಶಾÏಸ್ತ್ರವು ಆರ್ಯಭಟ, ವರಾಹಮಿಹಿರರೇ ಮುಂತಾದವರ ಮೂಲಕ ವಿಸ್ತರಿಸಿದುದರ ಪರಿಣಾಮವೋ ಏನೋ, ಬ್ರಹಸ್ಪತಿಯು ತನ್ನ ವೈದಿಕಯುಗದ ಲಕ್ಷಣಗಳನ್ನು ಕಳೆದುಕೊಂಡು, ರೋಮಕ (ರೋಮನ್‌) ಸಿದ್ಧಾಂತದ ಅತ್ಯಂತ ದೊಡ್ಡ ಆಕಾಶಕಾಯ - "ಜ್ಯುಪಿಟರ್‌' (ದೌÂ-ಪಿತರ)ನಾಗಿ ಬಿಡುತ್ತಾನೆ.
ತೈತ್ತಿರೀಯ ಬ್ರಾಹ್ಮಣದಲ್ಲಿ ಮರುತ್ತುಗಳೂ ಗಣಪತಿಗಳು (ಮರುತೋ ಗಣಾನಾಂ ಪತಯಃ). ಗಣಪತಿ ಇಲ್ಲಿ ಗೌರೀತನಯನಲ್ಲ. ಅದುವರೆಗೆ "ಗೌರಿ', "ಪಾರ್ವತಿ', "ಉಮಾ' ಕಾಣುವುದಿಲ್ಲ. ಬದಲಾಗಿ ಅಲ್ಲಿರುವುದು ವಾಗಂಭೃಣಿ, ಅದಿತಿ ಮತ್ತು ಶಚಿ ಅಥವಾ ಅಥವಾ ಇಳಾ, ಭಾರತೀ, ಸರಸ್ವತೀ = ತಿಸ್ರೋದೇವ್ಯಃ. ಗೌರಿಯು ಕಾಣಿಸಿಕೊಳ್ಳುವುದು ವಾಜಸನೇಯಿ ಸಂಹಿತೆ, ಶತರುದ್ರೀಯ ಮುಂತಾದ ಅನಂತರದ ಕಾಲದಲ್ಲಿ. ಗೌರಿಯು ವೇದದ ನಿಕೃತಿಗೆ ಸಮಾನ ಕಲ್ಪನೆ. ಗ್ರೀಕರ ಆರ್ತೆಮಿಸ್‌, ಲೂನಾ, ಲೋನಾ, ನೋನಾ, ನಾನದೇವಿಯರಿಗೆ (ಪಾಶ್ಚಾತ್ಯ) ಸಮಾನವಾದ ಕಲ್ಪನೆಯೂ ಹೌದು. ಆಕೆ ಎಲ್ಲ ದುರಿತಗಳ ತಾಯಿ. ಗೌರಿಯ ಪುತ್ರ ಗಣೇಶ ಎಲ್ಲ ದುರಿತಗಳನ್ನು ತಂದೊಡ್ಡುವವ = ವಿಘ್ನಕರ್ತ. ಇವುಗಳ ನಿವಾರಣೆಗೆ ಗೌರಿ-ಗಣೇಶಗಳ ಸಂತೈಸುವಿಕೆ, ಪೂಜಿಸುವಿಕೆ. ಪೂಜಿಸಿದ ಬಳಿಕ ವಿಸರ್ಜನ. ಪೂಜಿಸಿ ವಿಸರ್ಜಿಸುವ ಈ ಕ್ರಮ, ದಕ್ಷಿಣಭಾರತದ ವೈದಿಕಕಲ್ಪನೆಯ ಹೊರನಿಲ್ಲುವ ಆಚರಣೆ. ಮಾರಮ್ಮ , ಮಾಸೋಬಾ ಇತ್ಯಾದಿ ದೇವತೆಗಳನ್ನು ಪೂಜಿಸಿ ವಿಸರ್ಜಿಸುವಂತೆ. ಗಣೇಶನೂ ಪ್ರಧಾನವಾಗಿ ದಕ್ಷಿಣಭಾರತದ ಮೂಲದಲ್ಲಿ ಆಯೇìತರ ದೇವತೆಯಾಗಿದ್ದು ಪೂಜಿಸಿ ವಿಸರ್ಜಿಸಲ್ಪಡುವವನು.
ಶರಣು ಸಿದ್ಧಿವಿನಾಯಕ...
ಸೂತ್ರಗಳ ಕಾಲದಲ್ಲಿ ವಿನಾಯಕನಿದ್ದಾನೆ. ಕ್ರಿ.ಪೂ. 1ನೇ ಶತಮಾನದ ಪತಂಜಲಿ, ಅದರ ಮೊದಲ ಮೌರ್ಯರ ಕಾಲದಲ್ಲಿ ವಿಗ್ರಹಗಳ ಬಗ್ಗೆ ಹೇಳುವಾಗ ಶಿವ-ಸ್ಕಂದ-ವಿಶಾಖರ ಉಲ್ಲೇಖವಿದ್ದರೂ, ಗಣೇಶ ಇಲ್ಲ. ಹಾಗಾಗಿ, ಪುರಾಣಗಳಲ್ಲಿ ಗಣೇಶ ಶಿವನ ಹಿರಿಯ ಮಗನಾದರೂ, ಇತಿಹಾಸದಲ್ಲಿ ಸ್ಕಂದನೇ ಮೊದಲು ಕಾಣಿಸಿಕೊಳ್ಳುವವನು. ಆದರೆ, ವಿಘ್ನ-ವಿನಾಯಕನಿದ್ದ . ಬೌಧಾಯನ ಸೂತ್ರದಷ್ಟು ಪ್ರಾಚೀನಕ್ಕೆ ಈತನನ್ನು ರುದ್ರಪುತ್ರನಾಗಿ ಕಾಣಬಹುದು. ಆದರೆ ಒಂದಲ್ಲ, ಎಂಟು ರುದ್ರರಿಗೆ ಎಂಟು ವಿನಾಯಕ ಪುತ್ರರು. ವಿನಾಯಕ = ವಿಘ್ನಕಾರಕ. ಇನ್ನೊಂದು ಅರ್ಥ ವಿ+ನಯನ = ದೂರ ಒಯ್ಯುವವನು = ವಿಘ್ನಹರ್ತ. ಮೊದಲಲ್ಲಿ ವಿಘ್ನಕರ್ತನೆಂದೇ ಈತನನ್ನು ತಿಳಿದದ್ದು. ಎರಡನೆಯ ಅರ್ಥ ಕ್ರಿ. ಶ. ದ 4-5ನೇ ಶತಮಾನದ ಕಾಲದಲ್ಲಿ ಸೇರಿಕೊಂಡದ್ದು. ವಿಘ್ನಕರ್ತ ಗೌರೀತನಯನಾಗಿದ್ದ. ವಾಯು ಪುರಾಣ ಅತಿ ಪ್ರಾಚೀನ ಮಾಹಿತಿಗಳ ಆಗರ. ಅದರಲ್ಲಿ ಶಿವಪೂಜೆಯಾಗುತ್ತಿರುವ ಮನೆಮಠಗಳಲ್ಲಿ ವಿನಾಯಕನ ಬಾಧೆಯಿಲ್ಲವೆಂಬ ಉಲ್ಲೇಖವಿದೆ. ಶಿವನು ವಿನಾಯಕ ಬಾಧೆಗೆ ತಡೆಯೊಡ್ಡುವಾತ.
ಜೈನ ಧರ್ಮದಲ್ಲೂ ವಿನಾಯಕನಿದ್ದಾನೆ. ಆತನೂ ವಿಘ್ನಕರ್ತನೇ. ಅಲ್ಲಿ ಸಿದ್ಧನೆಂದು ಕರೆಯಲ್ಪಡುತ್ತಾನೆ. ಆತ ಸಿದ್ಧಿವಿನಾಯಕನಲ್ಲ. ಜಿನ-ಅರ್ಹಂತನೇ ಸಿದ್ಧ, ಆದಿಪೂಜ್ಯ. ಹಾಗಾಗಿ, ಅಲ್ಲಿ ಅಕ್ಷರಾಭ್ಯಾಸದಲ್ಲಿ ಆತನನ್ನು "ಓಂ ನಮಃ ಸಿದ್ಧಂಗ' ಎಂದು ಸ್ಮರಿಸುವುದು. ಅದು ಗಣಪತಿ- ವಿನಾಯಕನಲ್ಲ. ಇನ್ನು ಬೌದ್ಧರಲ್ಲಿ ಈತ ಹೇರುಕ-ಹೇರಂಭನೆಂಬ ಬುದ್ಧ . ಬುದ್ಧಿ ಅಂದರೆ ಜ್ಞಾನ. ಅಕ್ಷರಜ್ಞಾನದಾತ ಹೇರಂಭ ಬುದ್ಧ , ವಾಕ³ತಿ. ವೃದ್ಧಿ-ಸಿದ್ಧಿ ಪ್ರದಾಯಕ ವಿನಾಯಕ. ಮಹಾಯಾನದ ಬೌದ್ಧರ ಮಂಜುಶ್ರೀ- ಮಂಜುಕಲ್ಪಗಳಲ್ಲಿ ವಿನಾಯಕರೆಂದರೆ ವಿಘ್ನಕಾರಕರೇ.
ಒಂದು ರೀತಿಯಲ್ಲಿ ಈ ಬೌದ್ಧರ ಕಲ್ಪನೆಯೇ ಮುಂದಿನ ಪುರಾಣಗಳ ಸ್ಕಂದ-ಕುಮಾರ ಮತ್ತು ಗಣಪತಿಯ ನಡುವಿನ ಅಸೂಯೆ-ಪೈಪೋಟಿಗೆ ಮೂಲವಾಗಿದ್ದಿರಬೇಕು. ಗಣಪತಿ ಸ್ಕಂದನಿಗಿಂತ ಹೆಚ್ಚು ಬುದ್ಧಿವಂತ. ಸ್ಕಂದನಷ್ಟೇ ವೀರನೂ ಕೂಡಾ. ಪಾರ್ವತಿಯ ನೇರ ಪುತ್ರನಲ್ಲ. ದ್ವೆ„ಮಾತರ (ಎರಡು ತಾಯಂದಿರು)ನೆಂಬ ಬಿರುದನ್ನು ಹೊಂದಿದವನು. ವರಾಹ ಪುರಾಣದ ಪ್ರಕಾರ ಶಿವನ ಅಟ್ಟಹಾಸದಲ್ಲಿ ಜನಿಸಿದವ.
ಹೊಂಬಣ್ಣದ ಸುಂದರಕಾಯನಾದ ಇವನನ್ನು ಕಂಡು ಶಿವನ ಮಡದಿ ಮೋಹ ತಾಳಿದಾಗ ಶಿವನು ಈತನನ್ನು ಮತ್ಸರದಿಂದ ಲಂಬೋದರನನ್ನಾಗಿಸಿದನಂತೆ ! ಆನೆಯ ಮುಖದ ಕುರೂಪಿಯಾಗಲು ಶಪಿಸಿದನಂತೆ ! ಬಳಿಕ ಕರುಣೆದೋರಿ, ಕುರೂಪಿಯಾದರೂ ವಿನಾಯಕರ ಗಣದ ಪತಿಯಾಗೆಂದು ಅನುಗ್ರಹಿಸಿದನಂತೆ !
ದ್ವೆ„ಮಾತರ ಗಣಾಧಿಪಃ
ಕ್ರಿಸ್ತಶಕ ಮೊದಲ ಕೆಲವು ಶತಕಗಳ ತನಕ ವಿನಾಯಕನು ಸ್ಕಂದನಿಗಿಂತ ಕೆಳಗಿನ ಸ್ಥಾನದಲ್ಲೇ ಇದ್ದವನು. ತಾರಕಾಸುರ ವಧೆಗೆ ಸೇನಾನಿಯಾಗಿ ಪಡೆದ ಪುತ್ರ ಸ್ಕಂದ-ಕುಮಾರನು ಶಿವನಿಗೆ ಹೆಚ್ಚು ಪ್ರಿಯನಾದವನಾಗಿದ್ದನೆ? ಈ ಸಂದೇಹ ಶಿವ ಗಣಪತಿಯರಿಗೆ ಸಂಬಂಧಿಸಿದ ಅನೇಕ ಪುರಾಣಗಳಲ್ಲಿ ಸೂಚ್ಯವಾಗಿದೆ. ಆದರೆ ಕ್ರಿ.ಶ. 6ನೇ ಶತಮಾನದ ಬಳಿಕ ವಿನಾಯಕ-ಗಣೇಶನು ಸ್ಕಂದನನ್ನು ಹಿಂದಕ್ಕೆ ಸರಿಸಿ, ಪ್ರಥಮಪೂಜ್ಯನಾಗಿ ನಿಲ್ಲುತ್ತಾನೆ. ಉತ್ತರಭಾರತದ ಆದ್ಯಂತ ವಿಷ್ಣು , ಶಿವ, ದುರ್ಗೆಯರ ಅಂತಸ್ತಿಗೆ ಸಮನಾಗಿ ಅದುವರೆಗೆ ಸ್ಥಾನ ಪಡೆದಿದ್ದ ಸ್ಕಂದ ಈಗ ಎರಡನೇ ಸ್ಥಾನಕ್ಕೆ ಸರಿಯುತ್ತಾನೆ. ಗುಪ್ತರ ಕಾಲದವರೆಗೆ ರಾಜರುಗಳ ಹೆಸರುಗಳನ್ನು ಪರಿಶೀಲಿಸಿದರೂ ವಿನಾಯಕ, ಗಣಪತಿ, ಗಣಪತಿಯರಿಲ್ಲ.
ಆದರೆ ಕುಮಾರಗುಪ್ತ, ಸ್ಕಂದಗುಪ್ತ, ಕಾರ್ತಿಕೇಯ ಇತ್ಯಾದಿಗಳನ್ನು ಕಾಣಬಹುದು. ಕ್ರಿ. ಪೂ. ದಿಂದ ಹಿಡಿದು ಕ್ರಿ.ಶ. 5ನೇ ಶತಮಾನದವರೆಗೆ ಈಗಿನ ಪಂಜಾಬದ ರೋಹಟಕದಿಂದ ಆಳುತ್ತಿದ್ದ ಯೌಧೇಯರು, ಶಕರಿಂದ ಹಿಡಿದು ಹೂಣರವರೆಗೆ ಹೊರಗಿನ ಆಕ್ರಮಣವನ್ನು ಎದುರಿಸುತ್ತ ಬಂದವರು ತಮ್ಮನ್ನು "ಮತ್ತ ಮಯೂರ'ರೆಂದೇ ಕರೆದುಕೊಳ್ಳುತ್ತಿದ್ದರು. ಸ್ಕಂದ-ಸೇನಾನಿಯೇ ಅವರ ಇಷ್ಟದೇವತೆ. ದಕ್ಷಿಣದ ಮೊದಲ ಅರಸರಾದ ಪಲ್ಲವ-ಕದಂಬರಲ್ಲೂ ಗಜಾನನನ ಹೆಸರಿನವರಿಲ್ಲ. ಗುಪ್ತರಲ್ಲಿಯೂ ಕುಮಾರಗುಪ್ತ, ಸ್ಕಂದಗುಪ್ತರೆಂಬ ಅರಸರಿದ್ದರು. ಕಾಳಿದಾಸ, ವರಾಹಮಿಹಿರ ಸ್ಕಂದನ ಪ್ರಶಂಸೆ ಮಾಡುತ್ತಾರೆ. ಅವರ ಯಾವ ಕೃತಿಯೂ ಗಣಪತಿಯ ಸ್ತುತಿಯಿಂದ ಆರಂಭವಾಗುವುದಿಲ್ಲ.
ಗಣಪತಿಯ ಸ್ತುತಿಯಿಂದ ಆರಂಭವಾಗುವುದು ಭವಭೂತಿ (ಕ್ರಿ.ಶ. 7ನೇ ಶತಮಾನ)ಯಿಂದ. ಮುಂದೆ ಅದು ಎಲ್ಲ ಪ್ರಾದೇಶಿಕ ಭಾಷೆಗಳಿಗೂ ವ್ಯಾಪಿಸುತ್ತದೆ. ಗಣೇಶನ ಸ್ತುತಿಯು ಮೊದಲು ಕಾಣಿಸಿಕೊಳ್ಳುವುದು ಸಂಸ್ಕೃತದ ಮಾಲತೀ-ಮಾಧವದಲ್ಲಿ ಮತ್ತು ಉತ್ತರರಾಮಚರಿತದಲ್ಲಿ. ಮಹಾರಾಷ್ಟ್ರದ ಉತ್ತರ ಭಾಗದವನು ಭವಭೂತಿ. ಆತನಿಂದ ಹಿಡಿದು ಆ ಪ್ರದೇಶದ 13ನೇ ಶತಮಾನದ ಮರಾಠೀ ಸಂತ ಜ್ಞಾನೇಶ್ವರನಿಂದ ಮುಂದೆ ಸಾಗಿ 17ನೇ ಶತಮಾನದ ಕರಾಡದ "ಮೋರಯಪಂತ'- ಹೀಗೆ ಸಾಗುತ್ತದೆ ಗಣಪತಿಯ ಪ್ರಭಾವ. ಈ ಮಹಾರಾಷ್ಟ್ರದ ಹತ್ತಿರದವರಾದ ಬ್ರಾಹ್ಮಣರ ಒಂದು ವರ್ಗ ಗಾಣಪತ್ಯ ಪಂಥವನ್ನು ಅನುಸರಿಸುವವರಾಗಿದ್ದಿರಬೇಕು. ಈ ವರ್ಗಕ್ಕೆ ಸೇರಿದವರೇ ಇಸ್ಲಾಂ ಧರ್ಮ ಸ್ವೀಕರಿಸಿ ಬಹಮನೀ ರಾಜ್ಯ ಸ್ಥಾಪಿಸಿದವರಾಗಿದ್ದಿರಬೇಕು. (ಬಹಮನೀ=ಬ್ರಾಹ್ಮಣ) ಹಾಗಾಗಿ, ಗುಲ್ಬರ್ಗಾದಲ್ಲಿರುವ ಬಹಮನೀ ರಾಜ್ಯದ ಕೋಟೆಯೊಳಗೆ ಇಂದಿಗೂ ಗಣೇಶನ ದೇವಾಲಯ ಉಳಿದು ಕೊಂಡಿದೆ.
ಬಹಮನಿಯವರು ಇದನ್ನು ಉಳಿಸಿಕೊಂಡೇ ಕೋಟೆಯನ್ನು ಕಟ್ಟಿಕೊಂಡರು. ಕ್ರಿ. ಶ. ಆರನೆಯ ಶತಮಾನದ ಬಳಿಕ ಗಣೇಶ ಪ್ರಬಲನಾಗುತ್ತಾನೆ. ಆಗ ಸ್ಕಂದ ಹಿಂದಕ್ಕೆ ತಳ್ಳಲ್ಪಡುತ್ತಾನೆ. ಸ್ಕಂದನ ಕಾಲದಲ್ಲಿ ಗಣೇಶ ವಿಘ್ನಗಳನ್ನುಂಟುಮಾಡುವವನು ವಿನಾಯಕ. ವಿನಾಯಕ ಒಬ್ಬನಲ್ಲ - ನಾಲ್ಕು ಅಥವಾ ಎಂಟು ಮಂದಿ ಇದ್ದರು. ಬೇರೆ ಬೇರೆ ಸಾಹಿತ್ಯದಲ್ಲಿ ಬೇರೆ ಬೇರೆ ಕಲ್ಪನೆಯಿದೆ. ಮಾನವಗೃಹ್ಯ ಸೂತ್ರ, ಬೈಜವಾಪ ಸೂತ್ರದಲ್ಲಿ ನಾಲ್ಕು ವಿಘ್ನರು. ಈ ವಿಘ್ನರನ್ನು ಹೊಡೆದೋಡಿಸಿ ರಕ್ಷಿಸುವಾತ "ಮಹಾಕ್ರೋಧ‌'ನಾದ ಸ್ಕಂದ.
ಈ ನಂಬಿಕೆ ಕ್ರಿ. ಶ. 5ನೇ ಶತಮಾನದವರೆಗೂ ಮುಂದುವರಿದಿತ್ತು. ಉದಾ: ಯಾಜ್ಞವಲ್ಕéಸ್ಮತಿಯಲ್ಲೂ ವಿನಾಯಕ ವಿಘ್ನಕಾರಕನೇ. ಪ್ರಾಚೀನ ಬೌಧಾಯನ ಸೂತ್ರದಲ್ಲಿ ಎಂಟು ವಿಘ್ನರು. ಹೇರಂಭ ಎನ್ನುವ ದ್ವಿಭುಜ ಗಣಪತಿಯು ಭವಭೂತಿಯ ಮೂಲಕ ಪ್ರಸಿದ್ಧನಾದ, ಜನಪ್ರಿಯನಾದ. ಪ್ರಾಯಃ ಬೌದ್ಧ ಮೂಲದ ಹೇರಂಭ-ಹೇರುಕನೇ ಮುಂದಕ್ಕೆ ಶೈವಾಗಮದೊಳಗೆ ಸೇರಿಕೊಳ್ಳುತ್ತಾನೆ. ಈತನ ಮೊದಲ ದಾಖಲೆ ಮಹಾಭಾರತದಲ್ಲಿದೆ. ಅಮರಕೋಶದ ಉಲ್ಲೇಖ ಹೀಗಿದೆ :
ವಿನಾಯಕೋ ವಿಘ್ನರಾಜೋ ದ್ವೆ„ಮಾತುರ ಗಣಾಧಿಪಃ |
ಅವ್ಯೇಕದಂತೋ ಹೇರಂಭೋ ಲಂಬೋದರ ಗಜಾನನಃ ||
ಮುಂದಕ್ಕೆ ಗಣೇಶಪುರಾಣ, ಮುದ್ಗಲಪುರಾಣಗಳ ಮೂಲಕ ಈತ ಪ್ರಸಿದ್ಧನಾಗುತ್ತಾನೆ. ಪ್ರಾಯಃ ಕ್ರಿ. ಶ. 10ನೇ ಶತಮಾನದ ಅನಂತರದ ಬೆಳವಣಿಗೆ ಇದು. ಇವುಗಳಿಗಿಂತಲೂ ಅನಂತರದ ಗಾಣಪತ್ಯರ ರಚನೆ ಗಣೇಶ ಅಥರ್ವಶೀರ್ಷ ಉಪನಿಷತ್ತು. ಕ್ರಿ. ಶ. 7ನೇ ಶತಮಾನದ ಬಳಿಕ ಒಂದೊಂದಾಗಿ ಎಲ್ಲ ಶೈವ ಪುರಾಣಗಳೂ ಈತನನ್ನು ಸೇರಿಸಿಕೊಂಡೇ ಸಾಗುತ್ತವೆ. ವೈಷ್ಣವ ಭಾಗವತದ ಕೃಷ್ಣಕತೆಯನ್ನೇ ಹೆಸರು ಬದಲಾಯಿಸಿಕೊಂಡು ರಚಿಸಿದ ಕೃತಿ ಗಣೇಶಪುರಾಣ. ಅಲ್ಲಿ ವಸುದೇವ-ದೇವಕಿ-ಕಂಸ, ತೃಣಾವರ್ತ, ಧೇನುಕ, ಪೂತನಿ, ಶಕಟಾಸುರ-ಮುಷಿ¡ಕ-ಚಾಣೂರ ಇತ್ಯಾದಿ ಎಲ್ಲರೂ ಇಲ್ಲಿ ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳುವರು. ಕೃಷ್ಣನ ಬದಲು ವಿಕಟ ಶಿಶು ಗಣೇಶ. ವಸುದೇವ- ದೇವಕಿಯರ ಬದಲು ಕಶ್ಯಪ-ಅದಿತಿ. ಸಾಕು ತಂದೆ ನಂದಗೋಪನು ಇಲ್ಲಿ ಕಾಶೀರಾಜ. ಕಂಸನ ಬದಲು ನರಕಾಂತಕ. ಪೂತನಿಗೆ ಬದಲು ವಿರಜಾ ರಾಕ್ಷಸಿ, ಮುಷ್ಟಿಕ-ಚಾಣೂರರ ಬದಲು ಉದ್ಧತ-ದುಂಧುರ. ಹೀಗೆ ಒಟ್ಟು ಗಣೇಶ ಪುರಾಣವೇ ಭಾಗವತದ ಪ್ರತಿರೂಪ. ಬಾಲಕೃಷ್ಣನಂತೆ ಬಾಲಗಣೇಶನೂ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿಸುತ್ತಾನೆ. ವಿಶ್ವರೂಪದರ್ಶನ ಮಾಡಿಸುತ್ತಾನೆ. ಪ್ರಾಯಃ ನರ್ಮದೆಗಿಂತ ದಕ್ಷಿಣದ ಮಹಾರಾಷ್ಟ್ರದಲ್ಲಿ ಈ ಪುರಾಣ ಹುಟ್ಟಿಕೊಂಡಿರಬೇಕು. ಜ್ಞಾನೇಶ್ವರನಿಂದ ಹಿಡಿದು ಮಹಾರಾಷ್ಟ್ರದ ಎಲ್ಲ ಸಂತರೂ, ವೈಷ್ಣವರೂ ಸೇರಿದಂತೆ ತಮ್ಮ ಎಲ್ಲ ಕೃತಿಗಳ ಮೊದಲಲ್ಲಿ ಗಣೇಶನನ್ನು ಸ್ತುತಿಸುತ್ತಿದ್ದರು. ಅದೇ ರೀತಿ ವೈದಿಕ ಕರ್ಮಗಳಾದ ಹೋಮಹವನಗಳಲ್ಲಿ ವೇದದ ಬ್ರಹ್ಮಣಸ್ಪತಿಯನ್ನು ಮೊದಲು ಪ್ರಾರ್ಥಿಸುತ್ತಿದ್ದ ಕ್ರಮ, ವಕ್ರತುಂಡ ಮಹಾಕಾಯನ ಸ್ತುತಿಯಾಗಿ ಪರಿವರ್ತಿತವಾದದ್ದು ಕಳೆದ ಒಂದು ಸಾವಿರ ವರ್ಷಗಳಿಂದ !
ವಾತಾಪಿ ಗಣಪತಿಂ ಭಜೆ...
ಮಹಾರಾಷ್ಟ್ರದಲ್ಲಿ ಇಂದು ನಾವು ಕಾಣುವ ಗಣೇಶೋ ತ್ಸವದ ಮೂಲಪುರುಷ ಕರ್ಹಾಡ ಮೂಲದ ಮೋರೋಪಂತ. 17ನೇ ಶತಮಾನದಲ್ಲಿ ಈತ ಪುಣೆಯ ಹತ್ತಿರ ಗಣೇಶನ ವಿಗ್ರಹ ಸ್ಥಾಪಿಸಿ ಚತುರ್ಥಿಯಿಂದ ಅನಂತಚತುರ್ದಶಿಯವರೆಗೆ ಪೂಜಿಸಿ ವಿಸರ್ಜಿಸುವ ಸಂಪ್ರದಾಯ ಹುಟ್ಟುಹಾಕಿದವ. ಅಂದಿನಿಂದ ಆ ದೇವಾಲಯದ ಊರು "ಮೋರೆಗಾಮ್‌' ಆಯಿತು. ವಿಸರ್ಜಿಸುವಾಗ ಮರಾಠಿಯಲ್ಲಿ "ಮೋರಯನ ತಂದೆ ಗಣಪತಿಯೇ, ಬೇಗನೇ ಮುಂದಿನ ವರ್ಷ ಬಾ' ಎನ್ನುವ ಒಕ್ಕಣೆ (ಗಣಪತಿ ಬಾಪ್ಪಾ ಮೋರಯಾ | ಪುಡಚಾ ವರ್ಷಾ ಲೌಕರ್‌ ಯಾ |) ಎಂದು ಹಾಡಿ ಕುಣಿಯುವ ಸಂಪ್ರದಾಯ ಮಹಾರಾಷ್ಟ್ರದಾದ್ಯಂತ ಇಂದಿಗೂ ನಾವು ಕಾಣಬಹುದು. ಚಿತ್ಪಾವನ ಪೇಶ್ವೆಯವರ ಮನೆದೇವತೆಯಾಗಿದ್ದ ಗಣೇಶ ಬಾದಾಮಿಯ ಚಾಳುಕ್ಯರಿಗೆ ವಾತಾಪಿ ಗಣಪತಿ. ಗಣಪತಿಯು ಹೀಗೆ ಮುಂದಕ್ಕೆ ಮಹಾರಾಷ್ಟ್ರ , ಉತ್ತರಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ದೇವತೆಯಾಗಿ ವಿಘ್ನಕರ್ತನ ಬದಲು ವಿಘ್ನ-ವಿನಾಯಕನಾಗಿ ವಿಜಯನಗರದ ಅರಸರವರೆಗೂ ತನ್ನ ಕೀರ್ತಿಯನ್ನು ವರ್ಧಿಸುತ್ತ ಸಾಗಿದ.
ವಿಜಯನಗರದ ಅನಂತರದಲ್ಲಿ ತಮಿಳುನಾಡಿಗೂ ಆತ ತನ್ನ ಜನಪ್ರಿಯತೆಯನ್ನು ಚಾಚಿಕೊಂಡ. ಅತ್ಯಂತ ದೊಡ್ಡ ಗಣಪತಿಯ ವಿಗ್ರಹವಿರುವುದು ತಮಿಳುನಾಡಿನಲ್ಲಿ. ಅಲ್ಲಿಯ ವೈಷ್ಣವರಿಗೆ ಪರದೈವವಾದ ಹರಿಯೇ ಗಣಪತಿ. ನಾರಾಯಣನೇ ಗಣಪತಿ. ಅವರ ವಿದ್ಯಾರಂಭದಲ್ಲಿ ಗಣಪತಿಯನ್ನೇ ಓಂ ನಮೋ ನಾರಾಯಣಾಯ ಎಂದು ಸಂಬೋಧಿಸುತ್ತಾರೆ. "ಹರಿಃ ಶ್ರೀ ಗಣಪತಯೇ' ಎನ್ನುತ್ತಾರೆ. ತುಳುನಾಡಿನಲ್ಲೂ ಲಕ್ಷ್ಮೀಸಮೇತ ನರಸಿಂಹ ರೂಪ ಸಹಿತ ಗಣಪತಿಯು ಮಾಧ್ವರೂ ಸೇರಿದಂತೆ ಅನೇಕರ ಮನೆದೇವತೆಯಾಗಿದ್ದಾನೆ. .
ತಮಿಳುನಾಡಿನಲ್ಲಿ ಒಂದು ಹೇಳಿಕೆಯಿದೆ. ಶಿವನು ಬ್ರಾಹ್ಮಣರ ದೇವತೆ, ಮಾಧವ ಕ್ಷತ್ರಿಯರದ್ದು. ಬ್ರಹ್ಮ ವೈಶ್ಯರದ್ದು. ಗಣನಾಯಕ ಶೂದ್ರರದ್ದು. ಆದರೆ ಒಟ್ಟು ಭಾರತದಲ್ಲಿ ಗಣಪತಿಯು ಶೂದ್ರರಲ್ಲಿ ಪ್ರಿಯನಾದರೂ ಬ್ರಾಹ್ಮಣರೂಪದಲ್ಲೇ ಬಿಂಬಿತನಾಗಿದ್ದಾನೆ. ಉತ್ತರಭಾರತದಲ್ಲಿ ಗುಜರಾತಿನಿಂದ ಮೊದಲ್ಗೊಂಡು, ರಾಜಸ್ಥಾನ, ಮಧ್ಯಪ್ರದೇಶದ ಕಡೆ ಗಾಣಪತ್ಯ ಪಂಥದ ಪ್ರಭಾವವಿಲ್ಲದ ಕಾರಣ ಅಲ್ಲಿ ಗಣೇಶನ ಪ್ರಭಾವ ಕಡಿಮೆ. ಹಾಗಾಗಿ, ಗಣೇಶ ಬಹುತೇಕ ದಕ್ಷಿಣಭಾರತದ ದೇವತೆ.
ಇಂದು ಗಣೇಶ ಸೃಷ್ಟಿ , ಸ್ಥಿತಿ, ಲಯಗಳಿಗೆ ಕಾರಣೀ ಭೂತನಾದ ಸರ್ವಸ್ಥಿತ, ಸರ್ವಗತ, ಸರ್ವವ್ಯಾಪ್ತನಾದ ಬ್ರಹ್ಮಾಂಡರೂಪಿಯೇ ಆಗಿ, ಇಂದಿಗೆ ಮಹಾಗಣಪತಿಯ ರೂಪದಲ್ಲಿ ಆರಾಧ್ಯನಾಗಿದ್ದಾನೆ. ಮತ್ತೆ ವೇದಕಾಲದ ಬ್ರಹ್ಮಣಸ್ಪತಿ-ಪ್ರಜಾಪತಿಯಾಗಿ, ಭೂಮ್ಯಂತರಿಕ್ಷ ವ್ಯಾಪಿಯಾಗಿ ದೌÂ-ಪಿತರನಾಗಿ, ಬೃಹತ್ಛರೀರನಾಗಿ ಪೂಜಿಸಲ್ಪಡುತ್ತಾನೆ.

ಗುರುವಾರ, ಅಕ್ಟೋಬರ್ 16, 2014

*ರಾಮಚಂದ್ರಾಪುರ ಮಠ*

        ಕರ್ನಾಟಕದ ಶ್ರೀ ಶಂಕರಭಗವತ್ಪಾದ ಮಠ ಪರಂಪರೆಯಲ್ಲಿ ಒಂದು ಸುದೀರ್ಘವಾದ ಇತಿಹಾಸವನ್ನು ತನ್ನೊಡಲೊಳಗೆ ತುಂಬಿಕೊಂಡ ಅನೇಕ ಗುರು ಪೀಠಗಳಲ್ಲಿ ಮುಖ್ಯವಾಗಿ ನಮಗೆ ಕಾಣುವುದು ಶೃಂಗೇರಿಯ ಶಾರದಾ ಪೀಠ, ಸ್ವರ್ಣವಳ್ಳಿಯ ಸರಸ್ವತೀ ಪೀಠ ಹಾಗೂ ಪ್ರಸ್ತುತ ರಾಮಚಂದ್ರಾಪುರದ ಗೋಕರ್ಣಮಂಡಲಾಧೀಶ್ವರ ಪೀಠ. ಇದಲ್ಲದೇ ಇನ್ನೂ ಕೆಲವು ನಡಾವಳಿಯ ಮೂಲಕ ಪರಂಪರಾನುಗತವಾಗಿ ಬಂದ ಮಠಗಳೂ ಇವೆ.ಪ್ರಸ್ತುತ ಇಲ್ಲಿ ನಾನು ಗೋಕರ್ಣಮಂಡಲಾಧೀಶ್ವರ ಪೀಠದ ಕುರಿತು ಕೆಲ ವಿಚಾರಗಳನ್ನು ಅರುಹಲೆತ್ನಿಸುತ್ತೇನೆ.
      ಈ ವಿಚಾರವನ್ನು ವಿವೇಚಿಸುವಾಗ ಈ ಮಠದ ಹಿನ್ನೆಲೆಯನ್ನು ನೋಡಲೇ ಬೇಕು. ಶ್ರೀ ಮಠದ ಇತಿಹಾಸವನ್ನು ಗಮನಿಸಿದಾಗ ನಮಗೆ ಕಾಣ ಸಿಗುವುದು ಶ್ರೀ ಶಂಕರ ಭಗವತ್ಪಾದರಿಂದ ಬಂದ ಗುರು ಪರಂಪರೆ.
     ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಯಾತ್ರೆಯ ಸಮಯದಲ್ಲಿ ಭಾರತ ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣವನ್ನು ತಲುಪಿದರು. ಅಲ್ಲಿನ ಸ್ಥಳ ದೇವತೆಯಾದ ಮಹಾಬಲೇಶ್ವರನನ್ನು ಪೂಜಿಸಿದರು. ನಂತರ ಶ್ರೀ ವರದೇಶ ನನ್ನು ಪೂಜಿಸಲು ತಮ್ಮ ಶಿಷ್ಯರೊಮ್ದಿಗೆ ಶತಶೃಂಗಕ್ಕೆ ತೆರಳಿದರು. ( ಅಂದರೆ ಗೋಕರ್ಣದ ಮಹಾಬಲ ದೇವಾಲಯವು ಶ್ರೀ ಶಂಕರರಿಗಿಂತ ಇಲ್ಲಿ ಮೊದಲೇ ಪ್ರತಿಷ್ಠಾಪಿತವಾಗಿದ್ದ ದೇವಾಲಯವಾಗಿತ್ತು ಎಂಬುದು ನಿರ್ವಿವಾದ..!!) ಈ ಶತಶೃಂಗವು ಶಾಂತಿ-ನೆಮ್ಮದಿಯ ತಾಣವಾಗಿತ್ತು. ಇಲ್ಲಿ ಪರಸ್ಪರ ವೈರತ್ವವ ನ್ನು ಹೊಂದಿದ ಪ್ರಾಣಿಗಳೂ ಬಹು ಸಖ್ಯದಿಂದ ಜೀವಿಸುತ್ತಿದ್ದವು . ಅಂತೆಯೇ ವರದ ಮುನಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ? ಅಲ್ಲಿನ  ’ಅಶೋಕವನ’ ದಲ್ಲಿ ಒಂದು ಹೆಣ್ಣು ಹುಲಿಯು ಅನಾಥವಾಗಿದ್ದ ಜಿಂಕೆಯೊಂದಕ್ಕೆ ತಾಯಿಯ ಮಮತೆಯನ್ನು ತೋರುತ್ತಿದ್ದುದನ್ನು ನೋಡಿ  ಶ್ರೀ ಭಗವತ್ಪಾದರು ಮೂಕ ವಿಸ್ಮಿತರಾದರು. ( ಸಾಮಾನ್ಯವಾಗಿ ಶ್ರೀ ಶಂಕರಭಗವತ್ಪಾದರ ಸಂಚಾರದ ಎಲ್ಲಾ ಕ್ಷೇತ್ರಗಳಲ್ಲಿ ಇಂತಹ ವೈರತ್ವ- ಸಖ್ಯದ ಕಥೆಗಳು ಬರುತ್ತವೆ.!!)  ನಂತರದಲ್ಲಿ ಅಲ್ಲಿ ವರದ ಮುನಿಗಳು ಶ್ರೀಗಳನ್ನು ಸ್ವಾಗತಿಸಿ ಮಹಾತ್ಮರು ಸದಾ ಪೂಜಿಸಲು ಅನುಕೂಲವಾಗುವಂತೆ ತಮಗೆ ತಮ್ಮ ಗುರುಗಳಾದ ಅಗಸ್ತ್ಯರು ನೀಡಿದ್ದ ಪರಮ ಪೂಜನೀಯನಾದ ಶ್ರೀ ರಾಮ-ಸೀತೆ-ಲಕ್ಷ್ಮಣ ಮೂರ್ತಿಯನ್ನೂ ಹಾಗೂ ಶ್ರೀ ಚಂದ್ರಮೌಳೇಶ್ವರ ಲಿಂಗವನ್ನೂ ಕೊಟ್ಟರು. ಆಮೇಲೆ ಶ್ರೀ ಶ್ಂಕರಾಚಾರ್ಯರು ಸಮಾಜದ ಉದ್ಧಾರಕ್ಕಾಗಿ ಧರ್ಮ ಮಾರ್ಗ ಬೋಧನೆಗಾಗಿ ಅಲ್ಲಿ ಆ  ಶ್ರೀ ಸೀತಾಲಕ್ಷ್ಮಣ ಸಹಿತ ರಾಮಚಂದ್ರ ಹಾಗೂ ಶ್ರೀ ಚಂದ್ರಮೌಳೀಶ್ವರ ವಿಗ್ರಹವನ್ನು ಪೂಜಿಸುವುದಕ್ಕಾಗಿ ಮಠವೊಂದನ್ನು ಸ್ಥಾಪಿಸಿ ಅದನ್ನು "ಶ್ರೀ ರಘೂತ್ತಮ ಮಠ" ಎಂದು ಕರೆದರು. ಅಲ್ಲಿಗೆ ತಮ್ಮ ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರಿಂದ ಅದಾಗಲೇ ದೀಕ್ಷೆಯನ್ನೂ ಪಡೆದಿದ್ದ ಶ್ರೀ ವಿದ್ಯಾನಂದರನ್ನು ಪ್ರಥಮ ಪೀಠಾಧಿಪತಿಯಾಗಿ ನಿಯಮಿಸಿದರು.ಇಲ್ಲಿಂದ ಗೋಕರ್ಣದಲ್ಲಿರುವ ಶ್ರೀ ರಘೂತ್ತಮ ಮಠವು ಕರ್ನಾಟಕದ ಮಠ ಪರಂಪರೆಯಲ್ಲೊಂದಾಗಿ ರೂಪುತಳೆಯಿತು.(ಈ ವಿಚಾರಗಳು ಶ್ರೀ ಮಠಕ್ಕೆ ಸಂಬಂಧಿಸಿದ ಕಥೆಗಳಿಂದ ತೆಗೆದುಕೊಂಡಿದೆ)

      ಈಗ ನಾವು ಈ ಮಠಕ್ಕೆ ಸಂಬಂಧಿಸಿದ ಇನ್ನಿತರ ಐತಿಹಾಸಿಕ ಸತ್ಯಗಳ ಕುರಿತು ವಿವೇಚಿಸೋಣ. ಹೀಗೆ ಮಠದ ಕುರಿತು ಮಾಹಿತಿಗಳನ್ನು ಕಲೆಹಾಕುವಾಗ ನಮಗೆ ಪ್ರಾಕ್ ಕಲ್ಪನೆಗಳಾಗಿ ದೊರೆಯುವ ಇನ್ನಿತರ ಆಧಾರಗಳ ಬಗ್ಗೆ ನೋಡಿದಾಗ ನಮಗೆ ಸಿಕ್ಕಿದ್ದು ಕೆಳದಿಯ ಐತಿಹಾಸಿಕ ದಾಖಲೆಗಳನ್ನು ವಿಧಿವತ್ತಾಗಿ ಕಾಪಿಡಿದ ಶ್ರೀ ಗುಂಡಾಜೋಯಿಸರು ಬರೆದ  ಶ್ರೀ ರಾಮಚಂದ್ರಾಪುರಮಠದ ರಾಜಮಾನ್ಯ ಇತಿಹಾಸ ವೈಭವ ಸಂ-೧,-೨,-೩, ಮತ್ತು ಶ್ರೀ ರಾಮಚಂದ್ರಾಪುರ ಮಠಕ್ಕೆ ಸಂಬಂಧಿಸಿದ ಕೆಲವು ತಾಳಗ್ರಂಥಗಳು, ತಾಮ್ರಶಾಸನಗಳು, ಹಾಗೂ ಶ್ರೀ ಮಠದ ಯತಿಗಳು ವಿರಚಿಸಿದ  ಆತ್ಮವಿದ್ಯಾಆಖ್ಯಾಯಿಕಾ, ಮಠೀಯ ವೃತ್ತಾಂತಕ್ಕೆ ಸಂಬಂಧಿಸಿ ಕೆಕ್ಕಾರು ಶ್ರೀ ಶಿವಭಟ್ಟ ಎಂಬವರು ಬರೆದ ’ತುಳಸೀ ವಿಯೋಗ ವಿಜ್ಞಾನ’ ಹಾಗೂ ವಿಕ್ಕಿಪೀಡಿಯಾದಿಂದ ಪಡೆದ ಕೆಲವು ನಂಬಲರ್ಹ ಮಾಹಿತಿಗಳು.

     








ತರಲೆ ಪ್ರಶ್ನೆಗೆ ಪುರಳೆ ಉತ್ರ

ಪ್ರಶ್ನೆ:- ಕಂಪ್ಯೂಟರ್ ಕಂಡು ಹಿಡಿದವನು ಯಾರು?
ಉತ್ರ - ಒಬ್ಬ ವಿಜ್ಞಾನಿ
=
ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರುಬರೆಯಿರಿ?
ಉತ್ರ:- ಮೂಸಂಬಿ, ಕಲ್ಲಂಗಡಿ, ಆಪಲ್ ಮತ್ತು ಒಂದು ಡಜನ್
ಬಾಳೆಹಣ್ಣು
=
ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
ಉತ್ರ: - ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ...
ಮಿಕ್ಕಿದ್ದೆಲ್ಲಾ ವಿದೇಶ.
=
ಪ್ರಶ್ನೆ:- ಈ ಛತ್ರಿ ಬಾಳಿಕೆ ಬರುತ್ತಾ?
ಉತ್ರ:- ಖಂಡಿತಾ, ಆದ್ರೆ ನೀರಿಗೆ ಹಾಕ್ಬೇಡಿ
=
ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
ಉತ್ರ:- ನನ್ನ ಫೇಲ್ ಮಾಡೋಕ್ಕೆ
=
ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ
ದ್ರವ ಯಾವುದು?
ಉತ್ರ: - ಇಡ್ಲಿ, ದೋಸೆ!!!
=
ಪ್ರಶ್ನೆ:- ರಾವಣನಿಗೆ ಹತ್ತು ತಲೆ ಇತ್ತು ಅಂದ್ರಲ್ಲ?
ಉತ್ರ:- ಹೌದು, ಏನಿವಾಗ?
ಪ್ರಶ್ನೆ:- ಎಡಗಡೆ ಎಷ್ಟಿದೆ, ಬಲಗಡೆ ಎಷ್ಟಿದೆ?!
=
ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
ಉತ್ರ: - ಗೆದ್ದವರಿಗೆ
=
ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ
ಬರೆಯಿರಿ
ಉತ್ರ:- ಮಳೆ ಬಂದ ಕಾರಣ
ಪಂದ್ಯವನ್ನು ರದ್ದುಗೊಳಿಸಲಾಗಿದೆ
=
ಪ್ರಶ್ನೆ:- ಈ ಸೇಬನ್ನು ಎರಡು ಭಾಗ ಮಾಡಿ ಇಬ್ಬರೂ ತಿನ್ನೋಣವೇ?
ಉತ್ರ: ಬೇಡ, ನಾಲ್ಕು ಭಾಗ ಮಾಡಿ ಎರಡೆರಡು ತಿನ್ನೋಣ, ನಂಗೆ
ತುಂಬಾ ಹಸಿವಾಗ್ತಿದೆ.
=
ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
ಉತ್ರ:- ಈಗಲೂ ಬದುಕಿರುತ್ತಿದ್ದರು.
=
ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?
ಉತ್ರ:- ಕಾಯುತ್ತದೆ.
=
ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ ಮಾಡಿದರು?
ಉತ್ರ:- ಸುಮಾರು 14ನೇ ಪುಟದಿಂದ 22ನೇ ಪುಟಗಳವರೆಗೆ
=
ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
ಉತ್ರ:-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ ಅಂತ!
=
ಪ್ರಶ್ನೆ:- ಮಾವು ಹೆಚ್ಚಾಗಿ ಎಲ್ಲಿ ಬೆಳೆಯುತ್ತದೆ?
ಉತ್ರ:- ಮರದಲ್ಲಿ
=
ಪ್ರಶ್ನೆ:- ಭೂಮಿ ಗುಂಡಗಿದೆ ಎನ್ನುವುದನ್ನು ಹೇಗೆ ನಿರೂಪಿಸುವಿರಿ?
ಉತ್ರ:- ಭೂಮಿ ಗುಂಡಗಿದೆ ನಿಜ, ಹಾಗಂತ ನಮ್ಮೇಷ್ಟ್ರು ಹೇಳಿದ್ರು.
ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ.
=
ಪ್ರಶ್ನೆ:- ಏಷ್ಯಾದ ಪ್ರಥಮ ಹಾಕಿ ಪಂದ್ಯ ಎಲ್ಲಿ ನಡೆಯಿತು?
ಉತ್ರ:- ಹಾಕಿ ಕ್ರೀಡಾಂಗಣದಲ್ಲಿ
=
ಪ್ರಶ್ನೆ:- ಶ್ರೀಕೃಷ್ಣ ಎಷ್ಟು ಹುಡುಗಿಯರನ್ನು ಮದ್ವೆ ಆಗಿದ್ದ?
ಉತ್ರ:- ಅವನು ಮದ್ವೆಯಾಗಿರೋರೆಲ್ಲಾ ಹುಡುಗಿಯರೇ.
=
ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿ
ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
ಉತ್ರ:- ಹೇಗೆ ಬೇಕಾದರೂಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.
=
ಪ್ರಶ್ನೆಪತ್ರಿಕೆಯೊಂದರ ಕೊನೆಯ ಪ್ರಶ್ನೆ:-
ಛಾಲೆಂಜ್ ಅಂದರೆ ಏನು?
ಹರಿ ಬರೆದ ಉತ್ತರ:- ಧಮ್ ಇದ್ರೆ ಪಾಸ್ ಮಾಡ

ರಾಮಚಂದ್ರಾಪುರ ಮಠ.. ಇನ್ನಷ್ಟು ವಿಚಾರಗಳು...

        ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪನೆಯಾದದ್ದು ಕ್ರಿ.ಶ ಎಂಟನೇ  

ಶತಮಾನದ ನಂತರ ಅನ್ನುವುದು ನಿರ್ವಿವಾದ. ನಮ್ಮದೂ ಸೇರಿ ಉಳಿದ ಮಠಗ

ಳೂ ಆವಾಗಲೇ ಸ್ಥಾಪಿತಗೊಂಡವು ಅಂತಿಟ್ಟುಕೊಳ್ಳೋಣ. 

ಆದರೆ ಶಂಕರರ ಸಮಕಾಲೀನರಾದ ಗೌಡಪಾದ ಪರಂಪರೆಯ ಕವಳೆ ಮಠ ಕ್ರಿ.ಶ 

ನಾಲ್ಕನೇ ಶತಮಾನದಲ್ಲೇ ಅಸ್ತಿತ್ವದಲ್ಲಿರಲು ಹೇಗೆ ಸಾಧ್ಯ? ಅವಕ್ಕೂ 

ಆಗಿಂದಲೇಅವಿಚ್ಛಿನ್ನ ಪರಂಪರೆ ಇದ್ದು. ಶಂಕರರ ಕಾಲವನ್ನ ಕ್ರಿ.ಪೂ ಅಂತಿಟ್ಕಂಡ್ರೆ 

ನಮ್ಮ ಪರಂಪರೆ ಅವಿಚ್ಛಿನ್ನ ಆಪ್ಪುದು ಹೆಂಗೆ?ಯಾವ ಬ್ರಾಹ್ಮಣರೂ ಹೊರಗಿಂದ 

ಬಂದಿಲ್ಲೆ. ಮೂಲ ಹವ್ಯಕರು ಇಲ್ಲಿಯವರೇ. ಅಹಿ ಅಂದರೆ ನಾಗ ಅಂತ ಅರ್ಥ ಇದೆ 

ಚತ್ರ ಅನ್ನುವುದು ಕ್ಷೇತ್ರ ಅನ್ನುವ ಪದದ ಅಪಭ್ರಂಶ. ನಾಗರಖಂಡ ಎಂದು 

ಶಾಸನಗಳಲ್ಲಿ ಸ್ಪಷ್ಟವಾಗಿದೆ, ನಾಗರಖಂಡ ಅನ್ನುವುದು ಶುಂಟಿ ಬೆಳೆಯುವ 

ಪ್ರದೇಶವೂ ಹೌದು, ಹಾಗೂ ಬನವಾಸಿಯ ನಾಗ ಶಿಲ್ಪವೇ ಪ್ರಥಮ ನಾಗ ಶಿಲ್ಪ.

ಇದು ಮಯೂರವರ್ಮನ ಕಾಲದ ನೇರವಾಗಿ ಅವನಿಗೇ ಸಂಬಂಧಿಸಿದ ಶಾಸನ 


ಒಂದರ ತುಣುಕು ಅ. ಇಂತಹ ಶಾಸನಗಳನ್ನಷ್ಟೇ. ಇಂತಹ ಶಾಸನಗಳನ್ನು 

ಈರೀತಿಯಾಗಿ ಓದಿದರೆ ಓದುಗರಿಗೆ ಅಥವಾ ಆಸಕ್ತರಿಗೆ ಆ ಕಾಲದ ಲಿಪಿಯ 




ಪರಿಚಯವೂ ಆಗುತ್ತದೆ ಹಾಗೂ ನಾವು ಹಿಂದೆ ಓದಿದ ಇತಿಹಾಸದಲ್ಲಿ ಏನೇ 

ತಪ್ಪಾಗಿದ್ದರೂ ಸಹ ಅದು ನಮ್ಮ ಗಮನಕ್ಕೆ ಬರುತ್ತದೆ. ಯಾಕೆಂದರೆ 

ಶಾಸನಗಳಲ್ಲಿ 


ಪದಚ್ಚೇದಗಳನ್ನು ಮಾಡುವಾಗ ಬಹಳ ಎಚ್ಚರವಿರಬೇಕು.

ಮಯೂರವರ್ಮನ ಕಾಲದಲ್ಲಿ ಬ್ರಾಹ್ಮಣರು ಹೊರಗಿನಿಂದ ಬಂದರು ಅಹಿಚ್ಚತ್ರದಿದ 

ಬಂದರು ಅನ್ನುವುದಕ್ಕೆ ಯಾವುದೇ ಹುರುಳಿಲ್ಲ. ಸ್ವತಃ ಮಯೂರ ವರ್ಮನೇ 

ಬ್ರಾಹ್ಮಣ ನಾಗಿದ್ದು ಅವನು ಬೇರೆ ಊರಿಂದ ಬ್ರಾಹ್ಮಣರನ್ನು ಕರೆತರುವ 

ಅವಶ್ಯಕತೆ ಅವನಿಗೆ ಇದ್ದಿರಲಿಲ್ಲ. ಅಹಿಚ್ಚತ್ರ ಎನ್ನುವುದು ಜೈನ ಕ್ಷೇತ್ರವಾಗಿತ್ತು 

ಅಂತ ಇತಿಹಾಸ ಹೇಳುತ್ತದೆ.


ಅಹಿಚ್ಛತ್ರ ಜೈನ ಕ್ಷೇತ್ರ. ಯುರೇಕಾ ಯುರೇಕಾ.......ಹಾಗಾದ್ರೆ ಅಹಿಚ್ಛರ ಇಪ್ಪುದು 


ಆಂಧ್ರದಲ್ಲೇ. ನಾಗಾರ್ಜುನ ಕೊಂಡದ ಪ್ರಭಾವ ಅದರ ಮೇಲೆ ಬೇಕಾದಷ್ಟಿದ್ದು



ಕದಂಬರು ಬ್ರಾಹ್ಮಣರಲ್ಲವೇ ಅಲ್ಲ.

ಶು೦ಗ೦ ಕಾಲದಲ್ಲಿ ಕಟ೦ಬು(ಕದ೦ಬ)ಗಳು ಪ್ರಸಿದ್ಧ ಕಡಲ ದೊರೆಗಳಾಗಿದ್ದರು. 

ಇವರನ್ನು ಕಡಲ್ಗಳ್ಳರೆ೦ದೂ, ಚೇರನ್ ಚೆ೦ಗುಟ್ಟವನ್ ಇವರನ್ನು  

ನಿಗ್ರಹಿಸಲು ಮೇಲಿ೦ದ ಮೇಲೆ ಹೋರಾಡಬೇಕಾಯಿತೆ೦ದೂ  ಪದಿಳ್ರುಪತ್ತು 

ಮತ್ತು ಶಿಲಪ್ಪದಿಗಾರ೦ನಲ್ಲಿ ತಿಳಿಸಲಾಗಿದೆ. ಈ ಕಡಲ್ಗಳ್ಳರು ಅನುರಾಧಪುರದ 

ಅರಿಪೋ ನದಿಮುಖದಲ್ಲಿ ತಮ್ಮ ನೆಲೆಯನ್ನು ಗುರುತಿಸಿಕೊ೦ಡಿದ್ದರೆ೦ದು ಮತ್ತು 

ಇದನ್ನು ಕದ೦ಬನದಿಯೆ೦ದು ಕರೆಯಲಾಗುತ್ತಿತ್ತೆ೦ದು ಅಭಿಪ್ರಾಯ ಪಡಲಾಗಿದೆ. 



          ಆ ಕಾಲದಲ್ಲಿ ಕದ೦ಬರು ಅಧಿಕಾರವನ್ನು ವಿಸ್ತರಿಸಿಕೊಳ್ಳಲು, 

ಸಿ೦ಹಳದೊಡನೆ 

ವಾಣಿಜ್ಯ ಸ೦ಬ೦ಧ ಹೊ೦ದಲು ತಮಿಳರೊಡನೆ ಕಾದಾಡಬೇಕಾಗಿ ಬ೦ದಿದ್ದು 

ಆಶ್ಚರ್ಯವಲ್ಲ.ಚಿತ್ರದುರ್ಗದ ತಮಟಕಲ್ಲು ವೀರಗಲ್ಲು ಈ ಹೋರಾಟಗಳನ್ನು 

ಉಲ್ಲೇಖ್ಹಿಸುತ್ತದೆ. ನರವು ಪಟ್ಟಣಕ್ಕೆ ಸ೦ಬ೦ಧಿಸಿದ೦ತೆ ಚೇರ ಮತ್ತು ಕದ೦ಬರ 

ನಡುವಿನ ಯುದ್ಧದ ಬಗ್ಗೆ ಹಲವು ದಾಖಲೆಗಳು ಸಿಗುತ್ತವೆ. ಈ ಪಟ್ಟಣದ ಉಲ್ಲೇಖ್ಹ 

ಪತಿಳ್ರಪತ್ತುವಿನಲ್ಲಿ ೨ ಬಾರಿ ಬ೦ದಿದ್ದು ಅಲ್ಲಿ ನೀಲಗಿರಿಯಲ್ಲಿ ಹುಟ್ಟಿ 

ಕೊಯಮತ್ತೂರಿನ ಉತ್ತರಕ್ಕೆ ಸಾಗಿ, ಕಾವೇರಿಯನ್ನು ಸೇರುವ ವಾಣಿ ಎ೦ಬ 

ನದಿಯ ಉಲ್ಲೇಖವಿದೆ. ಪೆರಿಪ್ಲಸ್ ಕರ್ತೃ ಟಾಲೆಮಿ ಈ ಪಟ್ಟಣ ಕಡಲ್ಗಳ್ಳರಾದ 

ಕದ೦ಬರ ವಶದಲ್ಲಿತ್ತೆನ್ನುತ್ತಾನೆ. ಇ೦ದಿನ ಸೇಲ೦ ಮತ್ತು 

ಕೊಯಮತ್ತೂರನ್ನೊಳಗೊ೦ಡ ಕೊ೦ಕನಾಡು ಕೆಲವೊಮ್ಮೆ ಚೇರರ 

ಅಧೀನದಲ್ಲಿದ್ದರೆ ಕೆಲ ಕಾಲ ಕದ೦ಬರ ವಶದಲ್ಲಿರುತ್ತಿದ್ದವ೦ತೆ.

ಭಾಷೆ ಮೌಖಿಕವಾಗಿಯೇ ಇದ್ದ ಕಾಲದಲ್ಲಿ ಕದ೦ಬರು ಲಿಖಿತ ವ್ಯವಹಾರದ 

ಅವಶ್ಯಕತೆಯನ್ನು ಅರಿತುಕೊ೦ಡಿದ್ದು ತಮ್ಮ ಅ೦ತಸ್ತನ್ನೂ, ವ೦ಶಾವಳಿಯನ್ನೂ 

ಉತ್ತಮಪಡಿಸಿಕೊ೦ಡು ತಮ್ಮ ಅರಸೊತ್ತಿಗೆಯನ್ನು 

ಅಧಿಕೃತಗೊಳ್ಳಿಸಿಕೊಳ್ಳಬೇಕೆ೦ಬ ದಾಹ ಉ೦ಟಾದಾಗ ಇದನ್ನು 

ಪೂರೈಸಿಕೊಳ್ಳಲು ಅಹಿಚ್ಛತ್ರ ಇತ್ಯಾದಿ ದೂರದೇಶದಿ೦ದ ವಿದ್ವಾ೦ಸರನ್ನು 

ಬರಮಾಡಿಕೊ೦ಡು ಪೋಷಣೆ ಒದಗಿಸಿ ಇಲ್ಲಿ ನೆಲೆಸಲು ಅವರ 

ಮನವೊಲಿಸಿದರು. ಕೆಲ ಶತಮಾನ ಸಮುದ್ರ ಸ೦ಪತ್ತಿನ ಮೇಲೆಯೇ 

ಅವಲ೦ಬನೆಗೊ೦ಡಿದ್ದ ಕದ೦ಬರನ್ನು ಬ್ರಾಹ್ಮಣ, ಕ್ಷತ್ರಿಯ ಎ೦ದೆಲ್ಲ ಹೊಗಳಲು 

ಕಾರಣ ಫಲದಾಯಿಗಳು ಬ್ರಾಹ್ಮಣರಾಗಿದ್ದುದೇ. ಅವರಿಗೆ ಭವ್ಯ 

ವ೦ಶಾವಳಿಗಳನ್ನೂ, ಕುಲಗೋತ್ರಗಳನ್ನೂ ಒದಗಿಸಿ, ಗುಪ್ತರೊಡನೆ ಅವರು 

ಮಾಡಿದ್ದ ನೆ೦ಟಸ್ತಿಕೆಯನ್ನು ಕೊ೦ಡಾಡುವುದೇ ಮುಖ್ಯ ಉದ್ದೇಶವಾಗಿತ್ತು.

ಕದ೦ಬರು ಬನವಾಸಿಯನ್ನು ರಾಜಧಾನಿಯನ್ನಾಗಿಟ್ಟುಕೊಳ್ಳುವ ನೂರಾರು ವರ್ಷ 

ಮೊದಲೇ ಕಡಲಿನಲ್ಲಿ ತಮ್ಮ ಅಧಿಕಾರವನ್ನು ಪ್ರತಿಪಾದಿಸಿಕೊಳ್ಳತೊಡಗಿದ್ದರೆ೦ದು 

ಶ೦ಗ೦ನ ಪದಿಳ್ರುಪತ್ತು, ಅಹನಾನೂರು, ಶಿಲಪ್ಪದಿಗಾರ೦ಗಳಲ್ಲಿ ಕವಿಗಳಾದ 

ಕಮಟ್ಟೂರ್, ಕಣ್ಣನಾರ್, ಮಾಮೂಲಣಾರ್, ಇಳ೦ಗೋ ಅಡಿಗಳ್ 

ವಿವರಿಸಿದ್ದಾರೆ. ಇವರ ಕುಲಸ೦ಕೇತವಾದ ಕದ೦ಬ ವೃಕ್ಷವು ಕದ೦ಪಿಲ್ 

ಪೆರುವಾಯಿಲ್ಲಿನ ದ್ವಾರಮ೦ಟಪದ ಇದ್ದುದನ್ನೂ, ಅದನ್ನು ಬೇರುಸಹಿತ ಕಿತ್ತ 

ನೆಡು೦ಚೇರಲ್ ಆದನ್ ಅದರ ಕಾ೦ಡದಿ೦ದ ನಗಾರಿಯೊ೦ದನ್ನು 

ತಯಾರಿಸಿದನೆ೦ದೂ ಅಹನಾನೂರರಲ್ಲಿ ಹೇಳಲಾಗಿದೆ. ಕಡಲ್ಗಳ್ಳರಾದ 

ಕದ೦ಬರನ್ನು ನಾಶಮಾಡಿದ ಅರಸ ಶೆ೦ಗುಟ್ಟವನ್ನಿನ ಕೀರ್ತಿ ಎಲ್ಲೆಡೆ ಹರಡಲಿ 

ಎ೦ದು ಆಶಯ ವ್ಯಕ್ತಪಡಿಸಿದ ಶಿಲಪ್ಪದಿಗಾರ೦ನ ಕವಿ, ಅವನ ಪ್ರತಾಪವನ್ನು 

ಉತ್ತರದ ಅರಸರಿಗೆ ತಿಳಿಸುತ್ತ ’ಕಪ್ಪ ತ೦ದೊಪ್ಪಿಸಿ ಕರುಣೆ ಗಳಿಸಿಕೊಳ್ಳಿ, 

ಇಲ್ಲದಿದ್ದರೆ ಕದ೦ಬರ ಅನುಭವವನ್ನು ನೆನಪಿಸಿಕೊಳ್ಳಿ’ ಎನ್ನುತ್ತಾನೆ. ಕದ೦ಬರ 

ಹಡಗುಗಳಿ೦ದ ತಪ್ಪಿಸಿಕೊಳ್ಳಲು ಗ್ರೀಕ್ ಮತ್ತು ರೋಮನ್ ಹಡಗುಗಳು 

ಹರಸಾಹಸ ಮಾಡಬೇಕಾಯ್ತೆ೦ದು ಟಾಲೆಮಿಯಿ೦ದಲೂ, ಪೆರಿಪ್ಲಸ್ಸಿನಿ೦ದಲೂ 

ತಿಳಿದುಬರುತ್ತದೆ. ಸಮುದ್ರಾಧಿಪತಿಗಳಾದ ಕದ೦ಬರು ಚೇರರಿಗೆ ಸೋತರೂ 

ಮತ್ತೆ ಬನವಾಸಿಯನ್ನು ನೆಲೆಯಾಗಿಸಿಕೊ೦ಡು ಒ೦ದು ರಾಜ್ಯದ ಒಡೆಯರಾದರು.



ನಾನು ಈ ಶಾಸನವನ್ನು ನೋಡಿದೆ... ಇಲ್ಲಿ ದ್ವಿಜಕುಲ ಎಂದು ಬರೆದಿದೆ.. 

ಇದನ್ನಾಧರಿಸಿಯೇ ನಮ್ಮ ಇದುವರೆಗಿನ ಇತಿಹಾಸಜ್ಞರೂ ಮಯೂರವರ್ಮ 

ಆಗಿದ್ದು ಶರ್ಮ ಎಂಬುದರಿಂದ ಎಂದೇ ಹೇಳಿದ್ದು.. ಆದರೆ ಈ ಶಾಸನವು 

ಮಯೂರವರ್ಮನ ಕುರಿತು ಏನು ಹೇಳಿದೆ ಎಂಬುದಿಲ್ಲ..

ಥೋ ಶಾಸನ ತಗಂಡ್ ಎಂತಾ ಮಾಡುದ್ರಾ? ಹರಚತುರ ಲಲಾಟಸ್ವೇದ 

ಬಿ೦ದೋಃಕದ೦ಬ ಅನ್ನತ್ತೆ ಹಲಸಿ ತಾಮ್ರಶಾಸನ. ಮಯೂರ ಶಿವನ ಬೆವರಿನಿಂದ 

ಹುಟ್ಟಿದವ. ಅವನಿಗೆ ಮೂರು ಕಣ್ಣು ಆರು ಕೈ ಇತ್ತು ಅಂತ. ಅದೆಲ್ಲಾ 

ರಾಜಕುಮಾರನ ಪಿಚ್ಚರಿಗೆ ಒಳ್ಳೇ ಕಥೆ.

ಶಾಸನಗಳಲ್ಲಿ ಒಬ್ಬನ ಉಲ್ಲೇಖ ಅಥವಾ ಆತ ಬಹು ಪ್ರಸಿದ್ಧನಾಗಿದ್ದರೆ ಅವನ 

ಬಗೆಗೆ ವರ್ಣನೆ ಬರುತ್ತದೆ, ಹಾಗೆಯೇ ತೆಗಳಿಕೆಗಳು ಇರುತ್ತವೆ. ಹಾಗಂತ ಯಾವ 

ಇತಿಹಾಸಕಾರನೂ ಮಯೂರವರ್ಮ್,ಅನು ಶಿವನ ಬೆವರಿನೊಇಂದ ಜನಿಸಿದ 

ಎಂದಿಲ್ಲ

ನನ್ನ ಪ್ರಕಾರ ಮಯೂರವರ್ಮ ಎಂಬ ಕ್ಯಾರೆಕ್ಟರ್ರೇ ಅರ್ಧಕ್ಕರ್ಧ ಪಿಕ್ಷನ್ನು. ಪಲ್ಲವರ 

ಮೇಳೆ ಆತ ಸಾಧಿಸಿದ ವಿಜಯಕ್ಕಾಗಿ ಪಲ್ಲವರ ಮೂಲಪುರುಷನನ್ನ ಮಯೂರನ 

ಮೇಲೆ ಆರೋಪಿಸಿ ಶಾಸನಗಳಲ್ಲಿ ವೈಭವೀಕರಿಸಿದ್ದೋ. ಅದನ್ನೇ ಈಗಿನ 

ಇತಿಹಾಸಕಾರರು ಬರ್ಕಂಡಿದ್ದೊ.

ನಮ್ಮ ಇತಿಹಾಸವನ್ನು ಅರಿಯಲು ನಮಗಿರುವ ಮಾರ್ಗಗಳಲ್ಲಿ ಈ ಶಾಸನಗಳು, 

ತಾಮ್ರಪತ್ರಗಳು ಚಿನ್ಹೆಗಳು ಮುಖ್ಯವಾದವು.. ನಾವು ಅವುಗಳನ್ನೇ 

ಅಲ್ಲಗಳೆಯುವುದು ಸರಿಯಲ್ಲ.. ಎಕ್ಸಾಗರೇಶನ್ ಇರುವುದನ್ನು ಬಿಡೋಣ.. ಆದರೆ 

ವಾಸ್ತವಕ್ಕೆ ಹತ್ತಿರವಿರುವುದನ್ನು ಆಯ್ದುಕೊಳ್ಳೋಣ..

ಇತಿಹಾಸವನ್ನು ಅರಿಯಲು ಶಾಸನ ಒಂದು ಮಾಧ್ಯಮವಷ್ಟೇ. ಆದರೆ ಅವೊಂದೇ 

ಅಲ್ಲ. ಕಾವ್ಯವೂ ಅಷ್ಟೇ. ಹೆಚ್ಚಿನ ಶಾಸನಗಳು ವೈಭವೀಕರಣಕ್ಕೊಳಗಾಗಿದ್ದರೆ 

ಕಾವ್ಯಗಳು ಪ್ರಕ್ಷೇಪಕ್ಕೊಳಗಾಗಿವೆ. ಆಗಿನ ಜನಪದವನ್ನೂ ನಾವು ಗಮನಿಸಬೇಕು

ಸರಿ ಸಚಿನ್ ರೆ ಅಂದಿನ ಜನಪದವನ್ನು ತಮ್ಮ ಶೈಲಿಯಲ್ಲೇ ಅಳೆದುಕೊಳ್ಳಿ. ಬೇಡ 

ಅನ್ನುವುದಿಲ್ಲ. ನಿಮ್ಮಷ್ಟೆಲ್ಲ ಜ್ಞಾನವನ್ನೋ ಅಥವಾ ತಾರ್ಕಿಕ ಮನಸ್ಸನೋ ನಾನು 

ಹೊಂದಲಾಗಿಲ್ಲ. ಶಾಸನಗಳನ್ನು ಅಲ್ಲಗಳೆಯುವ ಸಾಮರ್ಥ್ಯ ನ್ನನಗಿಲ್ಲ. ಆದ್ರೆ 

ನಾನು ಗುಡ್ಡ ಬೆಟ್ತಗಳನ್ನು ಅಲೆದು ಅಲ್ಲಿನ ಜನ ಪರಿಸರ ತಿಳಿದು ಶಾಸನದ 

ಉಲ್ಲೇಖ್ಹಗಳ ಸಾಧ್ಯಾಸಾಧ್ಯತೆ ಇರುವುದನ್ನು ಹೇಳಿದ್ದು ಬಿಟ್ಟರೆ ನನ್ನ ಸ್ವಂತದ್ದು 

ಹೇಳಿಲ್ಲ. ನಾನು ಎಲ್ಲರ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ.

 ಇದು ವಿಕ್ಕಿಪೀಡಿಯಾದಲ್ಲಿದ್ದದ್ದು ಮತೆ... ಎಂದಲ್ಲಾ...
.......................................



ಒಮ್ಮೆ ಆದಿ ಶಂಕರಾಚಾರ್ಯರು ತಮ್ಮ ಯಾತ್ರೆಯ ಸಮಯದಲ್ಲಿ ಭಾರತದ 

ಪಶ್ಚಿಮದ ಸಮುದ್ರ ತೀರದಲ್ಲಿರುವ ಗೋಕರ್ಣವನ್ನು ತಲುಪಿದರು. ಅಲ್ಲಿನ 

ಸ್ಥಳದೇವತೆಯಾದ ಮಹಾಬಲೇಶ್ವರನನ್ನು ಪೂಜಿಸಿದರು. ನಂತರ ಶ್ರೀ 

ವರದೇಶನನ್ನು ಪೂಜಿಸಲು ತಮ್ಮ ಶಿಷ್ಯರೊಂದಿಗೆ ಶತಶೃಂಗಕ್ಕೆ ತೆರಳಿದರು. 

ಈ 

ಸ್ಥಳವು ಶಾಂತಿ-ನೆಮ್ಮದಿಯ ಬೀಡಾಗಿದ್ದಿತು. ವನ್ಯ ಮೃಗಗಳಾದ ಹುಲಿ, 

ಹಾವುಗಳು ಸಾಧು ಪ್ರಾಣಿಗಳಾದ ಹಸು, ಜಿಂಕೆಗಳೊಂದಿಗೆ ಸಖ್ಯದಿಂದಿದ್ದವು. 

ವರದ ಮುನಿಗಳು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದ ಅಲ್ಲಿನ ಅಶೋಕ ವನದಲ್ಲಿ 

ಒಂದು ಹೆಣ್ಣು ಹುಲಿಯು ಅನಾಥವಾಗಿದ್ದ ಜಿಂಕೆಯೊಂದಕ್ಕೆ ತಾಯಿಯ 



ಮಮತೆಯನ್ನು ತೋರಿಸುತ್ತಿದ್ದಿದ್ದನ್ನು ನೋಡಿ ಶಂಕರಾಚಾರ್ಯರು 

ವಿಸ್ಮಿತರಾದರು. 

ವರದ ಮುನಿಗಳು ಶಂಕರಾಚಾರ್ಯರನ್ನು ಸ್ವಾಗತಿಸಿ ಮಹಾತ್ಮರು ಸದಾ 

ಪೂಜಿಸಲು ಅನುಕೂಲವಾಗುವಂತೆ ತಮಗೆ ತಮ ಗುರುಗಳಾದ ಅಗಸ್ತ್ಯ 

ಮುನಿಗಳು ಕೊಟ್ಟಿದ್ದ ಪವಿತ್ರವಾದ ರಾಮ, ಲಕ್ಷ್ಮಣ, ಸೀತೆ ಮತ್ತು 

ಚಂದ್ರಮೌಳೇಶ್ವರ ಲಿಂಗಗಳನ್ನು ಕೊಟ್ಟರು. ಆಗ ಶಂಕರಾಚಾರ್ಯರು ಸಮಾಜದ 

ಉದ್ಧಾರಕ್ಕಾಗಿ ಮತ್ತು ಆ ಪವಿತ್ರ ವಿಗ್ರಹಗಳ ಪೂಜೆಗಾಗಿ ಅಲ್ಲಿ ರಘೂತ್ತಮ 

ಮಠವನ್ನು ಸ್ಥಾಪಿಸಿದರು.[೧]

ಶಂಕರಾಚಾರ್ಯರು ತಮ್ಮ ಶಿಷ್ಯರಾದ ಸುರೇಶ್ವರಾಚಾರ್ಯರಿಂದ ದೀಕ್ಷೆ ಪಡೆದಿದ್ದ 


ಶ್ರೀ ವಿದ್ಯಾನಂದರನ್ನು ಅಲ್ಲಿನ ಪ್ರಥಮ ಪೀಠಾಧಿಪತಿಯಾಗಿ ನೇಮಿಸಿದರು. ಹೀಗೆ 

ಶ್ರೀ ರಾಮಚಂದ್ರಾಪುರ ಮಠ ಎಂದು ಹೆಸರಾಗಿರುವ ರಘೂತ್ತಮ ಮಠದ 

ಅವಿಚ್ಛಿನ್ನ 

ಪರಂಪರೆಯು ಆರಂಭವಾಯಿತು.

ಅವಿಚ್ಛಿನ್ನ ಪರಂಪರೆ.....


೧. ಶ್ರೀಮಜ್ಜಗದ್ಗುರು ಆದಿ ಶಂಕರಾಚಾರ್ಯ

೨. ಶ್ರೀ. ಸುರೇಶ್ವರಾಚಾರ್ಯ

೩. ಶ್ರೀ. ವಿದ್ಯಾನಂದಾಚಾರ್ಯ

೪. ಶ್ರೀ. ಚಿದೋಭೋಧ ಭಾರತೀ

೫. ಶ್ರೀ. ನಿತ್ಯಾನಂದ ಭಾರತೀ

೬. ಶ್ರೀ. ನಿತ್ಯಬೋಧಾನಂದ ಭಾರತೀ

೭. ಶ್ರೀ. ಸಚ್ಚಿದಾನಂದ ಭಾರತೀ

೮. ಶ್ರೀ. ಚಿದಾನಂದ ಭಾರತೀ

೯. ಶ್ರೀ. ಸೀತಾರಾಮಚಂದ್ರ ಭಾರತೀ

೧೦. ಶ್ರೀ. ಚಿದ್ಬೋಧ ಭಾರತೀ

೧೧. ಶ್ರೀ. ರಾಘವೇಶ್ವರ ಭಾರತೀ ೧

೧೨. ಶ್ರೀ. ರಾಮಚಂದ್ರ ಭಾರತೀ ೧

೧೩. ಶ್ರೀ. ಅಭಿನವ ರಾಘವೇಶ್ವರ ಭಾರತೀ

೧೪. ಶ್ರೀ. ರಾಮಯೊಗೀಂದ್ರ ಭಾರತೀ

೧೫. ಶ್ರೀ. ನರಸಿಂಹ ಭಾರತೀ

೧೬. ಶ್ರೀ. ನೇತ್ರಾನಂದ ಭಾರತೀ

೧೭. ಶ್ರೀ. ರಾಮಚಂದ್ರ ಭಾರತೀ ೨

೧೮. ಶ್ರೀ. ರಾಘವೇಶ್ವರ ಭಾರತೀ ೨

೧೯. ಶ್ರೀ. ವಿದ್ಯಾಧರೇಂದ್ರ ಭಾರತೀ

೨೦. ಶ್ರೀ. ರಘುನಾಥ ಭಾರತೀ

೨೧. ಶ್ರೀ. ರಾಮಚಂದ್ರ ಭಾರತೀ ೨

೨೨. ಶ್ರೀ. ರಘೂತ್ತಮ ಭಾರತೀ ೧

೨೩. ಶ್ರೀ. ಪರಮೇಶ್ವರ ಭಾರತೀ

೨೪. ಶ್ರೀ. ರಾಘವೇಶ್ವರ ಭಾರತೀ ೩

೨೫. ಶ್ರೀ. ರಘೂತ್ತಮ ಭಾರತೀ ೨

೨೬. ಶ್ರೀ. ರಾಘವೇಶ್ವರ ಭಾರತೀ ೪

೨೭. ಶ್ರೀ. ರಘೂತ್ತಮ ಭಾರತೀ ೩

೨೮. ಶ್ರೀ. ರಾಘವೇಶ್ವರ ಭಾರತೀ ೫

೨೯. ಶ್ರೀ. ರಘೂತ್ತಮ ಭಾರತೀ ೪

೩೦. ಶ್ರೀ. ರಾಘವೇಶ್ವರ ಭಾರತೀ ೬

೩೧. ಶ್ರೀ. ರಾಮಚಂದ್ರ ಭಾರತೀ ೪

೩೨. ಶ್ರೀ. ರಾಘವೇಂದ್ರ ಭಾರತೀ

೩೩. ಶ್ರೀ. ರಾಘವೇಶ್ವರ ಭಾರತೀ ೭

೩೪. ಶ್ರೀ. ರಾಮಚಂದ್ರ ಭಾರತೀ ೫

೩೫. ಶ್ರೀ. ರಾಘವೇಂದ್ರ ಭಾರತೀ ೨

೩೬. ಶ್ರೀ ರಾಘವೇಶ್ವರ ಭಾರತೀ -| - ೮ (೧೫/೪/೧೯೯೪ ರಿಂದ)
..........................





ಸರಾಸರಿ 60 ವರ್ಷ ಎಂದುಕೊಂಡರೂ... ಅಲ್ಲಿಗೆ 1800 ವರ್ಷಗಳ ಪರಂಪರೆ.... 

ಅಂದ್ರೆ ಶಂಕರಾಚಾರ್ಯಾರು ಬದುಕಿದ್ದು..?


ಇನ್ನು ಈ ಪರಂಪರೆ ಹೊಸನಗರದ ಸಮೀಪದ ರಾಮಚಂದ್ರಾಪುರಕ್ಕೆ ಬಂದ 

ಕಥೆಯ ಹಿನ್ನೆಲೆಯನ್ನು ಚೂರು ಕೆದಕಲೇ ಬೇಕು... ಅಲ್ಲವೇ....?



ಹನಿಯ ಅದು. ರಾಮಚಂದ್ರಾಪುರ ಅಂತ ಇರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ. 

೨ನೇ ಹರಿಹರ ಎನ್ನುವ ರಾಜ ರುದ್ರಪಾದದಲ್ಲಿರುವ ರಾಮಚಂದ್ರಾಪುರವನ್ನು 

(ಇಡೀಗ್ರಾಮ) ಮಠಕ್ಕೆ ಬಿಟ್ಟುಕೊಟ್ಟನು. ಆಮೇಲೆ. ಕಾಲಾನು ಕ್ರಮದಲ್ಲಿ ಅಲ್ಲಿನ 

ರುದ್ರಪಾದದ ಬ್ರಾಹ್ಮಣರು ಅಲ್ಲಿಂದ ದಕ್ಷಿಣ ಕನ್ನಡಕ್ಕೆ ಬಂದು ನೆಲೆಸಿದರು 

ಇಂದಿಗೂ ರುದ್ರಪಾದ ಎನ್ನುವ ಮನೆತನ ಸುಳ್ಯತಾಲೂಕಿನಲ್ಲಿದೆ. ಇದಕ್ಕೆ 

ಮೊದಲು 

ಹನಿಯದ ಸಮೀಪ ಇದ್ದುದು ಅದೇ ರಘೂತ್ತಮ ಮಠವೇ

ಇದು ರಾಮಚಂದ್ರಾಪುರದ ಮಠಕ್ಕೆ ಸಂಬಂಧಿಸಿದ ನಾಲ್ಕನೇ ತಾಮ್ರಶಾಸನ.....

(ಕೃಪೆ: ಸದ್ಯೋಜಾತ)

ಇದು ಕನ್ನಡ ಭಾಷೆಯಲ್ಲಿ ಮತ್ತು ನಾಗರೀ ಲಿಪಿಯಲ್ಲಿ ಬರೆಸಲಾಗಿದೆ. ಇದೇ 

ರುದ್ರಪಾದದ ಬಗೆಗೂ ಒಂದು ಶಾಸನ ಉಲ್ಲೇಖವಿದ್ದು. ಶ್ರೀ ರಾಮಚಂದ್ರಾಪುರ 

ಮಠದ ಸಂಪತ್ತು ಒಂದು ಇಡೀ ಗ್ರಾಮವನ್ನೇ ಪಡೆದಷ್ಟಿತ್ತು.


ಇಲ್ಲಿಯೂ ಸಹ ಅವಿಚ್ಚಿನ್ನ ಶಬ್ದ ಪ್ರಯೋಗ ಕಾಣಿಸುತ್ತಿಲ್ಲ. ನಾನು ಸಂಸ್ಕೃತ ಶಾಸನ 

ಗಮನಿಸಿ ಇಲ್ಲಿಯೇ ಹಾಕುತ್ತೇನೆ